ನವದೆಹಲಿ: ‘ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳದೇ ಇದ್ದರೆ ಅಥವಾ ಗೌರವಯುತ ವೇತನ ನೀಡದೇ ಇದ್ದರೆ ಅದು ದೇಶವು ಜ್ಞಾನಕ್ಕೆ ನೀಡುವ ಮೌಲ್ಯವನ್ನು ಕಡಿಮೆಗೊಳಿಸಿದಂತೆ ಆಗುತ್ತದೆ. ಅಲ್ಲದೆ ಅದು ಬೌದ್ಧಿಕ ಬಂಡವಾಳ ನಿರ್ಮಿಸುವ ಜವಾಬ್ದಾರಿ ಹೊಂದಿರುವವರ ಪ್ರೇರಣೆಯನ್ನೂ ಹಾಳುಗೆಡವುತ್ತದೆ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
‘ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುರುಬ್ರಹ್ಮ ಗುರುವಿಷ್ಣು, ಗುರುದೇವೋ ಮಹೇಶ್ವರಃ ಎಂದು ಪಠಿಸುವುದು ಸಾಕಾಗುವುದಿಲ್ಲ. ಈ ಘೋಷಣೆಗೆ ತಕ್ಕಂತೆ ದೇಶವು ಶಿಕ್ಷಕರನ್ನು ನಡೆಸಿಕೊಳ್ಳಬೇಕು’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೊಯಮಲ್ಯ ಬಾಗ್ಚಿ ಅವರ ಪೀಠ ಕಿವಿಮಾತು ಹೇಳಿತು.
ಗುಜರಾತಿನ ವಿವಿಧ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಕಡಿಮೆ ವೇತನ ನೀಡುತ್ತಿರುವ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಸಹಾಯಕ ಪ್ರಾಧ್ಯಾಪಕರು ತಿಂಗಳಿಗೆ ₹30,000 ವೇತನ ಪಡೆಯುತ್ತಿದ್ದಾರೆ ಎಂಬುದು ಬೇಸರದ ವಿಷಯ. ಅವರು ನಿರ್ವಹಿಸುವ ಕಾರ್ಯಗಳ ಆಧಾರದ ಮೇಲೆ ವೇತನ ರಚನೆಯನ್ನು ತರ್ಕಬದ್ಧಗೊಳಿಸಲು ಇದು ಸಕಾಲ ಎಂದು ಪೀಠ ಇದೇ ವೇಳೆ ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.