
ಪ್ರಶಾಂತ್ ಕಿಶೋರ್ ಮತ್ತು ಸುಪ್ರೀಂ ಕೋರ್ಟ್
ನವದೆಹಲಿ: ಚುನಾವಣೆಯಲ್ಲಿ ಮತದಾರರು ನಿಮ್ಮನ್ನು ತಿರಸ್ಕರಿಸಿದಾಗ, ಜನಪ್ರಿಯತೆ ಗಳಿಸುವ ಸಲುವಾಗಿ ನ್ಯಾಯಾಂಗದ ವೇದಿಕೆಗಳನ್ನು ಬಳಸುತ್ತೀರಾ? ಎಂದು ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ (ಪಿ.ಕೆ) ನೇತೃತ್ವದ ಜನ ಸುರಾಜ್ ಪಕ್ಷವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಜನ ಸುರಾಜ್ ಪಕ್ಷವು 2025ರ ಬಿಹಾರ ವಿಧಾನಸಭೆ ಚುನಾವಣೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಜನ ಸುರಾಜ್ ಪಕ್ಷದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಾಯ್ಮಾಲಾ ಬಾಗ್ಚಿ ಅವರ ಪೀಠವು ವಜಾಗೊಳಿಸಿದೆ.
‘ನಿಮ್ಮ ರಾಜಕೀಯ ಪಕ್ಷ ಚುನಾವಣೆಯಲ್ಲಿ ಎಷ್ಟು ಮತಗಳನ್ನು ಗಳಿಸಿದೆ?, ಜನರು ನಿಮ್ಮನ್ನು ತಿರಸ್ಕರಿಸಿದಾಗ, ನೀವು ಪರಿಹಾರ ಪಡೆಯಲು ನ್ಯಾಯಾಂಗ ವೇದಿಕೆಯನ್ನು ಬಳಸುತ್ತೀರಾ?’ ಎಂದು ಕಟುವಾಗಿ ಪ್ರಶ್ನಿಸಿದ ನ್ಯಾಯಪೀಠ, ಪಟ್ನಾ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದೆ.
ವಿಧಾನಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳಾ ರೋಜ್ಗಾರ್ ಯೋಜನೆಯಡಿ ಮಹಿಳೆಯರಿಗೆ ತಲಾ ₹10,000 ವರ್ಗಾಯಿಸಿದ್ದಾರೆ. ಇದು ಕಾನೂನುಬಾಹಿರ ಮತ್ತು ಸಂವಿಧಾನದ 14, 21, 112, 202 ಮತ್ತು 324ನೇ ವಿಧಿ ಉಲ್ಲಂಘನೆಯಾಗಿದೆ. ಹಾಗಾಗಿ ಮರು ಚುನಾವಣೆ ನಡೆಸಲು ನಿರ್ದೇಶನ ನೀಡಬೇಕೆಂದು ಸುರಾಜ್ ಪಕ್ಷ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿತ್ತು.
ಪ್ರಶಾಂತ್ ಕಿಶೋರ್ ಅವರ ಪಕ್ಷವನ್ನು ಪ್ರತಿನಿಧಿಸುವ ವಕೀಲ ಚಂದ್ರ ಉದಯ್ ಸಿಂಗ್ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.