ADVERTISEMENT

ಕ್ರೈಸ್ತರ ಮೇಲಿನ ದಾಳಿ: ವಿಚಾರಣೆಗೆ ‘ಸುಪ್ರೀಂ’ ಅಸ್ತು

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 12:52 IST
Last Updated 27 ಜೂನ್ 2022, 12:52 IST
ಸುಪ್ರೀಂ ಕೋರ್ಟ್‌  
ಸುಪ್ರೀಂ ಕೋರ್ಟ್‌     

ನವದೆಹಲಿ: ದೇಶದಾದ್ಯಂತ ಕ್ರೈಸ್ತ ಸಂಸ್ಥೆಗಳು ಮತ್ತು ಪಾದ್ರಿಗಳ ಮೇಲೆ ಹೆಚ್ಚುತ್ತಿರುವ ದಾಳಿ ಹಾಗೂದ್ವೇಷದ ಅಪರಾಧಗಳನ್ನುತಡೆಯಲು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿ ಅರ್ಜಿಯ ವಿಚಾರಣೆಗೆ ಸೋಮವಾರ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ದೇಶದಾದ್ಯಂತ ಪ್ರತಿ ತಿಂಗಳು ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಪಾದ್ರಿಗಳ ಮೇಲೆಸರಾಸರಿ 45 ರಿಂದ 50 ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆ. ಈ ವರ್ಷ ಮೇ ತಿಂಗಳಿನಲ್ಲಿಯೇ 57 ದಾಳಿಗಳು ನಡೆದಿವೆಎಂದು ಅರ್ಜಿದಾರರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಹೇಳಿದ್ದಾರೆ.

ಗೊನ್ಸಾಲ್ವಿಸ್ ಅವರು ಈ ವಿಷಯ ಪ್ರಸ್ತಾಪಿಸಿ, ಅರ್ಜಿಯ ತುರ್ತು ವಿಚಾರಣೆಗಾಗಿ ಪಟ್ಟಿ ಮಾಡುವಂತೆ ಕೋರಿದರು.

ADVERTISEMENT

ಇದನ್ನು ಆಲಿಸಿದನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನು ಒಳಗೊಂಡ ರಜಾಕಾಲದ ಪೀಠವು, ‘ನೀವು ಹೇಳುತ್ತಿರುವಂತೆ ದಾಳಿಗಳು ಸಂಭವಿಸುತ್ತಿದ್ದರೆ ಅದು ದುರದೃಷ್ಟಕರ. ನಿಮ್ಮ ಕೋರಿಕೆಯ ಅರ್ಜಿಯನ್ನುಪುನಾ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ನೀವು ಅದನ್ನು ಖಚಿತಪಡಿಸಿಕೊಳ್ಳಬಹುದು’ ಎಂದು ಹೇಳಿತು.

ಪೀಠವು,ಬೇಸಿಗೆ ರಜೆಯ ನಂತರ ನ್ಯಾಯಾಲಯಗಳ ಕಲಾಪಗಳನ್ನು ಜುಲೈ 11ರಂದು ಪುನರಾರಂಭಿಸುವಾಗ ಅದೇ ದಿನಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿತು.

ತೆಹ್ಸೀನ್ ಪೂನಾವಾಲಾ ತೀರ್ಪಿನಲ್ಲಿರುವ ಮಾರ್ಗಸೂಚಿಗಳ ಅನುಷ್ಠಾನ ಕೋರಿದ ಅರ್ಜಿಯಲ್ಲಿ, ರಾಷ್ಟ್ರದಾದ್ಯಂತ ದ್ವೇಷದ ಅಪರಾಧಗಳನ್ನು ಗಮನಿಸಲು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಮನವಿ ಮಾಡಲಾಗಿದೆ.

ಅಂಬಾನಿ ಕುಟುಂಬಕ್ಕೆ ಭದ್ರತೆ: ಇಂದು ‘ಸುಪ್ರೀಂ’ ವಿಚಾರಣೆ

ನವದೆಹಲಿ: ಮುಂಬೈನ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡುತ್ತಿರುವ ಭದ್ರತೆ ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲಿನ ತ್ರಿಪುರಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಕೇಂದ್ರದ ಮನವಿಯನ್ನು ಇದೇ 28ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ರಜಾಕಾಲದ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಂದ್ರದ ಶಿಫಾರಸಿನ ಮೇರೆಗೆ ಮಹಾರಾಷ್ಟ್ರ ಸರ್ಕಾರದಿಂದ ಅಂಬಾನಿಗಳಿಗೆ ಭದ್ರತೆ ಒದಗಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರವು ಯಾವುದೇ ಸಂಬಂಧ ಹೊಂದಿಲ್ಲದಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಹೈಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ತಿಳಿಸಿದರು.

ಅಂಬಾನಿಗಳಿರುವ ಬೆದರಿಕೆ ಬಗ್ಗೆ ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಮಂಗಳವಾರ ತನ್ನ ಮುಂದೆ ಹಾಜರಾಗುವಂತೆ ಗೃಹ ಸಚಿವಾಲಯದ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿರುವುದರಿಂದ, ಪೀಠವು ಮೇಲ್ಮನವಿಯನ್ನುತುರ್ತು ವಿಚಾರಣೆ ನಡೆಸಬೇಕು ಎಂದು ಮೆಹ್ತಾ ಮನವಿ ಮಾಡಿದರು.

ಬಿಕಾಶ್ ಸಾಹಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ತ್ರಿಪುರಾ ಹೈಕೋರ್ಟ್ ಮೇ 31 ಮತ್ತು ಜೂನ್ 21ರಂದು ಎರಡು ಮಧ್ಯಂತರ ಆದೇಶಗಳನ್ನು ನೀಡಿತ್ತು. ಬೆದರಿಕೆಗೆ ಸಂಬಂಧಿಸಿ ಗೃಹ ಸಚಿವಾಲಯ ನಿರ್ವಹಿಸುವ ಮೂಲ ಕಡತ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಂಬಾನಿ ಮತ್ತು ಅವರ ಪತ್ನಿ ಹಾಗೂ ಮಕ್ಕಳಿಗೆ ಇರುವ ಬೆದರಿಕೆ ಸಂಬಂಧ ವರದಿ ಆಧರಿಸಿ ಅವರಿಗೆ ಭದ್ರತೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.