ADVERTISEMENT

ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಮುನ್ನ ಆಪಾದಿತರಿಗೆ ನೋಟಿಸ್‌ ನೀಡಬೇಕು: ಸುಪ್ರೀಂ

ಹೈಕೋರ್ಟ್‌ಗಳಿಗೆ ಸೂಚಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 19 ಆಗಸ್ಟ್ 2022, 10:40 IST
Last Updated 19 ಆಗಸ್ಟ್ 2022, 10:40 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಶಿಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡುವ ಮುನ್ನ ಆಪಾದಿತರಿಗೆ ಹೈಕೋರ್ಟ್‌ಗಳು ನೋಟಿಸ್ ನೀಡಬೇಕು. ಇದರಿಂದ ಮೇಲ್ಮನವಿ ಸಲ್ಲಿಸಲು ಆಪಾದಿತರಿಗೆ ಅವಕಾಶ ಒದಗಿಸಿದಂತಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಪಿ.ಎಸ್‌.ನರಸಿಂಹ ಅವರಿದ್ದ ನ್ಯಾಯಪೀಠ, ಕೊಲೆ ಪ್ರಕರಣದ ಇಬ್ಬರು ಆಪಾದಿತರಿಗೆ ಜೀವಿತಾವಧಿ ವರೆಗೆ ಜೈಲು ಶಿಕ್ಷೆ ವಿಧಿಸಿ ರಾಜಸ್ಥಾನ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದೆ.

‘ಹೈಕೋರ್ಟ್‌ ತನಗಿರುವ ಅಧಿಕಾರವನ್ನು ಚಲಾಯಿಸುವ ಮೂಲಕ, ಆಪಾದಿತರಿಗೆ ನೀಡಿರುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಕ್ರಮ ಕೈಗೊಳ್ಳುವ ಮುನ್ನ ಅರ್ಜಿದಾರರಿಗೆ ನೋಟಿಸ್‌ ನೀಡಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಈ ಕಾರ್ಯವಾಗಿಲ್ಲ’ ಎಂದು ನ್ಯಾಯಪೀಠ ಹೇಳಿತು.

ADVERTISEMENT

ಅರ್ಜಿದಾರರಿಗೆ ಮರಣ ದಂಡನೆ ವಿಧಿಸದಿರುವ ಸೆಷನ್ಸ್‌ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಿಲ್ಲ ಎಂಬ ಅಂಶವನ್ನು ಸಹ ನ್ಯಾಯಪೀಠ ಪರಿಗಣಿಸಿದೆ.

ಈ ಎಲ್ಲ ಕಾರಣಗಳಿಂದ ಪರಿಶೀಲಿಸಿದಾಗ, ಅರ್ಜಿದಾರರಿಗೆ ಮುಂಚಿತವಾಗಿ ನೋಟಿಸ್‌ ನೀಡಿ, ತಮ್ಮನ್ನು ಸಮರ್ಥಿಸಿಕೊಳ್ಳಲು ಅವರಿಗೆ ಅವಕಾಶವನ್ನು ನೀಡದೆಯೇ ಶಿಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ ಎಂದೂ ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.