
ನವದೆಹಲಿ: ನ್ಯಾಯಾಂಗ ವ್ಯವಹಾರ, ಕಲಾಪಗಳನ್ನು ಸುಗಮವಾಗಿ ನಡೆಸಲು ಹೆಚ್ಚುವರಿ ಪೀಠಗಳನ್ನು ಸ್ಥಾಪಿಸುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಕೊಲ್ಹಾಪುರದಲ್ಲಿ ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರು ಮತ್ತು ವಿಭಾಗೀಯ ಪೀಠಗಳು ಕಾರ್ಯನಿರ್ವಹಿಸಲು ಆಗಸ್ಟ್ 1ರಂದು ಹೊರಡಿಸಿದ್ದ ಅಧಿಸೂಚನೆಯನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಎತ್ತಿಹಿಡಿದಿದೆ.
ಈ ನಿರ್ಧಾರವನ್ನು ಪ್ರಶ್ನಿಸಿ ರಂಜೀತ್ ಬಾಬುರಾವ್ ನಿಂಬಾಳ್ಕರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಪೀಠವು, ‘ನ್ಯಾಯಾಂಗ ಕೆಲಸದ ಹಂಚಿಕೆಯು ಮುಖ್ಯ ನ್ಯಾಯಮೂರ್ತಿಗಳ ವಿಶೇಷ ಹಕ್ಕು. ಆದರೆ, ಇದಕ್ಕಾಗಿ ರಾಜ್ಯಪಾಲರ ಅನುಮೋದನೆ ಪಡೆಯಬೇಕು’ ಎಂದು ಹೇಳಿದೆ.
ಮೂಲಸೌಕರ್ಯಗಳ ಸಾಧ್ಯತೆ ಮತ್ತು ಲಭ್ಯತೆಯನ್ನು ಪರಿಗಣಿಸಿ ಕೊಲ್ಹಾಪುರವನ್ನು ಹೆಚ್ಚುವರಿ ಪೀಠದ ಸ್ಥಳವಾಗಿ ನಿಗದಿಪಡಿಸಿ ಹೈಕೋರ್ಟ್ ಪ್ರಸ್ತಾವ ಸಿದ್ಧಪಡಿಸಿರುವುದನ್ನು ಪೀಠವು ಗಮನಿಸಿತು.
ಕೊಲ್ಹಾಪುರ, ಸಾಂಗ್ಲಿ, ಸತಾರಾ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ನಿರ್ದೇಶನಗಳಿಗೆ ಅನುಗುಣವಾಗಿ ಕೊಲ್ಹಾಪುರ ಪೀಠಕ್ಕೆ ವಹಿಸಲಾಗುತ್ತದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.