ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನದಿಂದ ಅಮಾನತುಗೊಂಡಿರುವ 12 ರಾಜ್ಯಸಭಾ ಸಂಸದರು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.
ರಾಜ್ಯಸಭೆಯ ಅಧ್ಯಕ್ಷರು ಆಗಿರುವ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಆರತಕ್ಷತೆ ಕಾರ್ಯಕ್ರಮ ಸೋಮವಾರ ರಾತ್ರಿ ನಡೆಯಿತು. ಅಮಾನತುಗೊಂಡಿರುವ ಸಂಸದರು ಸೇರಿದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು.
ಮುಂಗಾರು ಅಧಿವೇಶನದಲ್ಲಿ 'ದುರ್ವರ್ತನೆ, ಉದ್ಧಟತನ, ಅಶಿಸ್ತು ಮತ್ತು ಹಿಂಸಾತ್ಮಕ ವರ್ತನೆ' ತೋರಿದ ಆರೋಪದಲ್ಲಿ ರಾಜ್ಯಸಭೆಯ 12 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಅಮಾನತು ಮಾಡಿರುವ ಈ ಕ್ರಮವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ತಿಳಿಸಿದ್ದಾರೆ.
ಅಮಾನತಾದವರಲ್ಲಿ ಕಾಂಗ್ರೆಸ್ನ ಆರು, ಶಿವಸೇನಾ ಮತ್ತು ಟಿಎಂಸಿಯ ತಲಾ ಇಬ್ಬರು, ಸಿಪಿಎಂ ಮತ್ತು ಸಿಪಿಐಯ ತಲಾ ಒಬ್ಬರು ಸಂಸದರು ಇದ್ದಾರೆ. 12 ಸಂಸದರಲ್ಲಿ ಐವರು ಮಹಿಳೆಯರಿದ್ದಾರೆ. ಕಾಂಗ್ರೆಸ್ನ ಸಯ್ಯದ್ ನಾಸಿರ್ ಹುಸೇನ್, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ, ಸಿಪಿಎಂನ ಎಳಮರಂ ಕರೀಂ ಅಮಾನತಾದವರಲ್ಲಿ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.