ADVERTISEMENT

‘ಅನುಮಾನ ಎಷ್ಟೇ ಬಲವಾಗಿದ್ದರೂ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ‘: ಸುಪ್ರೀಂ

ಪಿಟಿಐ
Published 21 ಫೆಬ್ರುವರಿ 2021, 13:13 IST
Last Updated 21 ಫೆಬ್ರುವರಿ 2021, 13:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ಅನುಮಾನವು ಎಷ್ಟೇ ಬಲವಾಗಿದ್ದರೂ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಆರೋಪಿಯೇ ಇಂತಹ ಕೃತ್ಯವೆಸಗಿದ್ದಾನೆ ಎನ್ನುವುದಕ್ಕೆ ಸಾಕ್ಷ್ಯಗಳ ಸಂಗ್ರಹ ಅಗತ್ಯ. ತಪ್ಪಿತಸ್ಥ ಎಂದು ಸಾಬೀತುಪಡಿಸುವವರೆಗೂ ಆರೋಪಿ ಅಮಾಯಕ’ ಎಂದು ನ್ಯಾಯಾಲಯ ಹೇಳಿದೆ.

ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರನ್ನು ವಿದ್ಯುತ್‌ ಸ್ಪರ್ಶದ ಮೂಲಕ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಬ್ಬರನ್ನು ದೋಷಮುಕ್ತಗೊಳಿಸಿದ್ದ ಒಡಿಶಾ ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಹೇಮಂತ ಗುಪ್ತಾ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ವಿದ್ಯುತ್‌ ಆಘಾತದಿಂದ ಸಾವು ಸಂಭವಿಸಿದೆ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ ಮತ್ತು ಇದು ಹತ್ಯೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಪೀಠವು ತಿಳಿಸಿದೆ.

ಪ್ರಕರಣದ ವಿವರ: ‘ಆರೋಪಿಗಳಾದ ಬಾನಾಬಿಹಾರಿ ಮೊಹಾಪಾತ್ರಾ ಮತ್ತು ಅವರ ಮಗ ಲುಜಾ ಹಾಗೂ ಇತರರು ನನ್ನ ಪತಿಗೆ ವಿಷ ಕುಡಿಸಿದ ಬಳಿಕ ವಿದ್ಯುತ್‌ ಸ್ಪರ್ಶದಿಂದ ಹತ್ಯೆ ಮಾಡಲಾಗಿದೆ’ ಎಂದು ಗೀತಾಂಜಲಿ ತಾಡು ಎನ್ನುವವರು ದೂರು ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸಿಲ್ಲ. ಹೀಗಾಗಿಯೇ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.