ADVERTISEMENT

ಲಸಿಕೆ 'ಅದಲು-ಬದಲು' ಆಗದಂತೆ ಎಚ್ಚರ ವಹಿಸಿ: ಕೇಂದ್ರ ಆರೋಗ್ಯ ಸಚಿವ

ಪಿಟಿಐ
Published 2 ಜನವರಿ 2022, 13:00 IST
Last Updated 2 ಜನವರಿ 2022, 13:00 IST
ಮನ್‌ಸುಖ್ ಮಾಂಡವಿಯಾ
ಮನ್‌ಸುಖ್ ಮಾಂಡವಿಯಾ   

ನವದೆಹಲಿ: ಕೋವಿಡ್ ಲಸಿಕೆ ಅದಲು ಬದಲು ಆಗದಂತೆ ಖಾತ್ರಿಪಡಿಸುವ ನಿಟ್ಟಿನಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಪ್ರತ್ಯೇಕ ಲಸಿಕೆ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಭಾನುವಾರ ಸೂಚಿಸಿದ್ದಾರೆ.

ದೇಶದಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ನಾಳೆಯಿಂದ (ಜ.3) ಕೋವಿಡ್ ಲಸಿಕೆ ಅಭಿಯಾನವು ಆರಂಭವಾಗಲಿದೆ. ಈ ವಯೋಮಾನದವರಿಗೆ 'ಕೋವ್ಯಾಕ್ಸಿನ್' ಕೋವಿಡ್ ಲಸಿಕೆ ಮಾತ್ರ ಹಾಕಿಸಲಾಗುತ್ತದೆ.

ಇನ್ನೊಂದೆಡೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಜೊತೆಗೆ 'ಕೋವಿಶೀಲ್ಡ್' ಹಾಗೂ 'ಸ್ಪುಟ್ನಿಕ್ ವಿ' ಕೋವಿಡ್ ಲಸಿಕೆಯನ್ನು ವಿತರಿಸಲಾಗುತ್ತಿದೆ.

ಎಲ್ಲ ರಾಜ್ಯಗಳ ಆರೋಗ್ಯ ಸಚಿವರು, ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಆರೋಗ್ಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ಆನ್‌ಲೈನ್ ಸಂವಾದ ನಡೆಸಿದ ಮಾಂಡವಿಯಾ, ಮಾರ್ಗಸೂಚಿಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಸೂಚಿಸಿದರು.

ಲಸಿಕೆ ಅಭಿಯಾನದ ಸಂದರ್ಭದಲ್ಲಿ ಅದಲು ಬದಲು ಆಗುವುದನ್ನು ತಪ್ಪಿಸಲು, ಪ್ರತ್ಯೇಕ ಕೋವಿಡ್ ಕೇಂದ್ರಗಳನ್ನು (ಸಿವಿಸಿ), ಪ್ರತ್ಯೇಕ ಸೆಷನ್ ಕೇಂದ್ರ, ಪ್ರತ್ಯೇಕ ಸರತಿ ಸಾಲು ಮತ್ತು ಪ್ರತ್ಯೇಕ ಲಸಿಕೆ ತಂಡವನ್ನು ನಿಯೋಜಿಸುವಂತೆ ಮಾರ್ಗದರ್ಶನ ನೀಡಿದರು.

'ಕೋ-ವಿನ್' ಫ್ಲ್ಯಾಟ್‌ಫಾರ್ಮ್ ಬಳಸಿಕೊಂಡು ಫಲಾನುಭವಿಗಳಿಗೆ ಬೇಕಾಗುವ ಜಿಲ್ಲಾವಾರು ಕೋವಿಡ್ ಲಸಿಕೆ ಡೋಸ್ ಅಂದಾಜು ಲೆಕ್ಕವನ್ನು ನೀಡುವಂತೆ ಸೂಚಿಸಲಾಗಿದೆ.

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳ ಸಾರ್ವಜನಿಕ ಆರೋಗ್ಯ ವಲಯದ ಸಿದ್ಧತೆಯನ್ನು ಸಚಿವರು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.