ADVERTISEMENT

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮತ್ತೆ ಮಾತಿನ ಚಕಮಕಿ

ಪಿಟಿಐ
Published 7 ಏಪ್ರಿಲ್ 2023, 6:15 IST
Last Updated 7 ಏಪ್ರಿಲ್ 2023, 6:15 IST
ಸಿಎಂ ಎಂ.ಕೆ. ಸ್ಟಾಲಿನ್ ಮತ್ತು ರಾಜ್ಯಪಾಲ ಆರ್.ಎನ್. ರವಿ –ಸಂಗ್ರಹ ಚಿತ್ರ
ಸಿಎಂ ಎಂ.ಕೆ. ಸ್ಟಾಲಿನ್ ಮತ್ತು ರಾಜ್ಯಪಾಲ ಆರ್.ಎನ್. ರವಿ –ಸಂಗ್ರಹ ಚಿತ್ರ   

ಚೆನ್ನೈ: ’ವಿಧಾನಸಭೆ ಅನುಮೋದಿಸಿದ ಮಸೂದೆಯನ್ನು ತಡೆಹಿಡಿಯುವ ವಿವೇಚನೆಯನ್ನು ಹೊಂದಿದ್ದೇನೆ’ ಎಂಬ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ಹೇಳಿಕೆಯನ್ನು ಡಿಎಂಕೆ ಸರ್ಕಾರ ತೀವ್ರವಾಗಿ ವಿರೋಧಿಸಿದೆ. ’ ಮಸೂದೆ ಅಂಗೀಕರಿಸಲು ರಾಜ್ಯಪಾಲರು ಅನಾವಶ್ಯಕವಾಗಿ ನಿಧಾನಿಸುತ್ತಿದ್ದಾರೆ. ಈ ಮೂಲಕ ಕರ್ತವ್ಯ ನಿರ್ಲಕ್ಷಿಸುತ್ತಿದ್ದಾರೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದರು.

ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸ್ಟಾಲಿನ್, ’ರಾಜ್ಯಪಾಲರಿಗೆ ಮಸೂದೆಯನ್ನು ಅಂಗೀಕರಿಸಲು ಕಳುಹಿಸಿದರೆ ಹಲವಾರು ಪ್ರಶ್ನೆಗಳನ್ನು ಹಾಕಿ ವಾಪಾಸ್ ಸರ್ಕಾರಕ್ಕೇ ಅದನ್ನು ಹಿಂದಿರುಗಿಸುತ್ತಾರೆ. ಯೋಗ್ಯರಲ್ಲದವರು ಸಾಂವಿಧಾನಿಕ ಹುದ್ದೆಯಲ್ಲಿದ್ದರೆ ಮಸೂದೆಯನ್ನು ಧೈರ್ಯದಿಂದ ಸ್ವೀಕರಿಸದೆ ಅಥವಾ ವಿರೋಧಿಸದೇ ತಡೆಹಿಡಿಯುವ ಕಾರ್ಯವನ್ನು ಎಸಗುತ್ತಾರೆ’ ಎಂದರಲ್ಲದೇ ’ರಾಜ್ಯಪಾಲರು ಬೇಕಂತಲೇ ಬಿಲ್‌ ಅನ್ನು ಅನುಮೋದಿಸದೇ ನಿಧಾನಿಸುವ ಚಾಳಿ ಬೆಳೆಸಿಕೊಂಡಿದ್ದಾರೆ’ ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದರು.

ತಮಿಳುನಾಡು ರಾಜ್ಯಪಾಲ ರವಿ ಅವರು ಗುರುವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದರ ಸಂವಾದದಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದರು. ’ರಾಜ್ಯಪಾಲರು ಮಸೂದೆ ತಡೆಹಿಡಿದಿದ್ದಾರೆ ಅಂದರೆ ಆ ಮಸೂದೆಯು ತಿರಸ್ಕೃತವಾಗಿದೆ ಎಂದೇ ಅರ್ಥ. ದೇಶದ ಉನ್ನತ ನ್ಯಾಯಾಲಯವು ’ತಡೆಹಿಡಿ’ ಎಂಬ ಯೋಗ್ಯ ಭಾಷೆಯನ್ನು ’ತಿರಸ್ಕಾರ’ಕ್ಕೆ ಬಳಸುತ್ತದೆ’ ಎಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.