ಸಾವು (ಪ್ರಾತಿನಿಧಿಕ ಚಿತ್ರ)
ಆಗ್ರಾ: ಕಳೆದ ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ ಟೆಕಿಯೊಬ್ಬ ಹೆಂಡತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಜೀವ ಕಳೆದುಕೊಂಡಿದ್ದ. ಅಂಥಹದ್ದೇ ಘಟನೆ ಈಗ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
30 ವರ್ಷದ ಟೆಕಿಯೊಬ್ಬ ತಾನು ಸಾಯುತ್ತಿರುವುದಕ್ಕೆ ಹೆಂಡತಿಯೇ ಕಾರಣ ಎಂದು ಹೇಳಿ ವಿಡಿಯೊ ಹಂಚಿಕೊಂಡು ಫೆ.24ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಾನವ್ ಶರ್ಮಾ ಮೃತ ಟೆಕಿ. ಮಾನವ್ ಮುಂಬೈನಲ್ಲಿ ಟಿಸಿಎಸ್ ಕಂಪನಿಯಲ್ಲಿ ಲಸ ಮಾಡುತ್ತಿದ್ದ. ಜ.30ರಂದು ನಿಕಿತಾ ಎನ್ನುವ ಯುವತಿಯೊಂದಿಗೆ ಮಾನವ್ ವಿವಾಹವಾಗಿತ್ತು ಎಂದು ವರದಿ ತಿಳಿಸಿದೆ.
ಮಾನವ್ ಅವರ ತಂದೆ ನರೇಂದ್ರ ಶರ್ಮಾ ಅವರ ದೂರಿನ ಪ್ರಕಾರ, ಫೆ.23ರಂದು ಮಾನವ್ ಮತ್ತು ನಿಕಿತಾ ಆಗ್ರಾಗೆ ಬಂದಿದ್ದರು. ನಂತರ ಮಾನವ್, ನಿಕಿತಾ ಆಕೆಯ ಪೋಷಕರ ಮನೆಗೆ ಹೋಗಿದ್ದರು, ಅಲ್ಲಿ ಮಾನವ್ನನ್ನು ಅವಮಾನಿಸಿದ್ದಾರೆ. ಮನೆಗೆ ಹಿಂದಿರುಗಿದ ಬಳಿಕ ಫೆ. 24ರಂದು ಬೆಳಗಿನ ಜಾವ ಮಾನವ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ’ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಆತ್ಮಹತ್ಯೆಗೂ ಮುನ್ನ ಮೊಬೈಲ್ನಲ್ಲಿ 6.57 ನಿಮಿಷದ ವಿಡಿಯೊ ಮಾಡಿರುವ ಮಾನವ್, ‘ಈ ನಿರ್ಧಾರ ತಗೆದುಕೊಳ್ಳಲು ನನ್ನ ಹೆಂಡತಿಯೇ ಕಾರಣ. ಪುರುಷರಿಗೆ ರಕ್ಷಣೆ ನೀಡುವ ಕಾನೂನಿನ ಅಗತ್ಯವಿದೆ’ ಎಂದು ಮನವಿ ಮಾಡಿದ್ದಾರೆ. ಸಾಯಲು ಯಾವುದೇ ಭಯ ಇಲ್ಲ...ಪುರುಷರ ಬಗ್ಗೆಯೂ ಯೋಚಿಸಿ.. ಅವರು ಏಕಾಂಗಿಯಾಗಿದ್ದಾರೆ’ ಎಂದಿದ್ದಾರೆ.
ಮಾನವ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ನಿಕಿತಾ ವಿಡಿಯೊ ಹಂಚಿಕೊಂಡು, ‘ಮಾನವ್ ಕುಡಿದ ಅಮಲಿನಲ್ಲಿದ್ದಾಗ ನನ್ನನ್ನು ನಿಂದಿಸುತ್ತಿದ್ದ, ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದ’ ಎಂದು ಹೇಳಿದ್ದಾರೆ.
ಮಾನವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಿಕಿತಾ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರ ಸಂಬಂಧದಲ್ಲಿ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಎಸಿಪಿ ವಿನಾಯಕ್ ಭೋಸ್ಲೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.