
ಸೂರ್ಯ ಕಾಂತ್
ಕಟಕ್ (ಒಡಿಶಾ): ‘ತಂತ್ರಜ್ಞಾನವು ಮಾನವ ನ್ಯಾಯ ನಿರ್ಣಯದ ವೇಗ ಹೆಚ್ಚಿಸಲು ಮತ್ತು ದೋಷಗಳನ್ನು ಸರಿಪಡಿಸಲು ಬಳಕೆ ಆಗಬೇಕು. ಅದಕ್ಕೆ ಪರ್ಯಾಯವಾಗಿ ಬಳಕೆ ಆಗಲು ಸಾಧ್ಯವಿಲ್ಲ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
‘ಜನ ಸಾಮಾನ್ಯರಿಗೆ ನ್ಯಾಯವನ್ನು ಖಚಿತಪಡಿಸುವುದು: ಕಾನೂನು ಹೋರಾಟದ ವೆಚ್ಚ ಮತ್ತು ವಿಳಂಬವನ್ನು ಕಡಿಮೆ ಮಾಡುವ ತಂತ್ರಗಳು’ ವಿಷಯದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಭಾನುವಾರ ಮಾತನಾಡಿದರು.
‘ವಿಚಾರಣಾ ನ್ಯಾಯಾಲಯದಿಂದ ಸಾಂವಿಧಾನಿಕ ನ್ಯಾಯಾಲಯದವರೆಗೆ ನ್ಯಾಯಾಂಗ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲೂ ಹಲವು ವರ್ಷಗಳಿಂದ ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಮೇಲಿನ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಿದಷ್ಟು, ಕೆಳ ಹಂತದ ನ್ಯಾಯಾಲಯಗಳ ಮೇಲಿನ ಒತ್ತಡ ಅಧಿಕವಾಗುತ್ತದೆ’ ಎಂದು ಹೇಳಿದರು.
ಬಾಕಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
‘ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸಾಕಷ್ಟು ನ್ಯಾಯಾಲಯಗಳಿಲ್ಲದಿದ್ದರೆ, ಅತ್ಯಂತ ಪ್ರಾಮಾಣಿಕ ನ್ಯಾಯಾಂಗ ವ್ಯವಸ್ಥೆ ಕೂಡಾ ಒತ್ತಡಕ್ಕೆ ಸಿಲುಕಿ ಕುಸಿಯುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.