ADVERTISEMENT

ರಾಜಸ್ಥಾನ: ಬಿಜೆಪಿ ನಿಯೋಗಕ್ಕೆ ಪೊಲೀಸರ ತಡೆ

ಗಲಭೆ ಸಂತ್ರಸ್ತರ ಭೇಟಿಗೆ ಅವಕಾಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 18:25 IST
Last Updated 13 ಏಪ್ರಿಲ್ 2022, 18:25 IST
ಗಲಭೆಪೀಡಿತ ಕರೌಲಿಗೆ ತೆರಳುತ್ತಿದ್ದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು–ಪಿಟಿಐ ಚಿತ್ರ
ಗಲಭೆಪೀಡಿತ ಕರೌಲಿಗೆ ತೆರಳುತ್ತಿದ್ದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು–ಪಿಟಿಐ ಚಿತ್ರ   

ಜೈಪುರ: ಗಲಭೆ ನಡೆದಿದ್ದ ರಾಜಸ್ಥಾನದ ಕರೌಲಿಗೆ ತೆರಳುತ್ತಿದ್ದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ, ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್‌ ಪೂನಿಯಾ ಮತ್ತಿತರರನ್ನು ರಾಜಸ್ಥಾನ ಸರ್ಕಾರ ದಾರಿಮಧ್ಯದಲ್ಲೇ ತಡೆದಿದೆ.

ಕಾನೂನು ಸುವ್ಯವಸ್ಥೆ ನಿರ್ವಹಣೆ ಕಾರಣ ನೀಡಿ ಜೈಪುರ–ಆಗ್ರಾ ಗಡಿ ಬಳಿಯ ಮಹುವಾದಲ್ಲಿ ಅವರನ್ನು ಅಧಿಕಾರಿಗಳು ತಡೆದಿದ್ದಾರೆ. ಅವರನ್ನು ಬಸ್ಸಿನಲ್ಲಿ ಬೇರೊಂದು ಸ್ಥಳಕ್ಕೆ ಕರೆದೊಯ್ದು ಬಿಡುಗಡೆ ಮಾಡಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಕಾಂಗ್ರೆಸ್‌ನ ಒಲೈಕೆ ರಾಜಕಾರಣವನ್ನು ವಿರೋಧಿಸುವುದಾಗಿ ಹೇಳಿದರು. ‘ರಾಜಸ್ಥಾನವು ಅಫ್ಗಾನಿಸ್ತಾನವಲ್ಲ. ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರಂತೆನೋಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು. ರಾಜ್ಯ ಸರ್ಕಾರದ ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ನೀತಿಗಳನ್ನು ಖಂಡಿಸುತ್ತೇನೆ’ ಎಂದು ಹೇಳಿದರು.

ADVERTISEMENT

‘ಇಂದಿನ ಕಾಂಗ್ರೆಸ್‌ ಪಕ್ಷವು ಆಧುನಿಕ ಕಾಲದ ಮುಸ್ಲಿಂ ಲೀಗ್‌ ಆಗಿದೆ.ಮುಸ್ಲಿಂ ಲೀಗ್‌ ಹೇಗೆ ಹಿಂದೂಗಳ ಒಗ್ಗಟ್ಟನ್ನು ಒಡೆದು ದಬ್ಬಾಳಿಕೆ ಮಾಡಿತ್ತೋ, ಅದನ್ನು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಅಶೋಕ್‌ ಗೆಹಲೋತ್‌ ಅವರು ಮುಂದುವರಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಜಂಗಲ್‌ರಾಜ್‌ ನಿರ್ಮಾಣವಾಗಿದೆ’ ಎಂದು ಸೂರ್ಯ ಆರೋಪಿಸಿದರು.

ಏಪ್ರಿಲ್ 2ರಂದು ಹಿಂದೂ ಹೊಸ ವರ್ಷದ ಆಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್‍ಯಾಲಿಯ ಮೇಲೆ ಕಲ್ಲೂತೂರಾಟ ನಡೆದಿತ್ತು. ಈ ಘಟನೆಯು ಹಿಂಸೆಗೆ ತಿರುಗಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಕರ್ಫ್ಯೂ ಮುಂದುವರಿಕೆ: ಗಲಭೆ ಪೀಡಿತಮಧ್ಯಪ್ರದೇಶದ ಖರಗೋನ್‌ನಲ್ಲಿ ಮೂರನೇ ದಿನವಾದ ಬುಧವಾರವೂ ಕರ್ಫ್ಯೂ ಮುಂದುವರಿಸಲಾಗಿದೆ. ಭಾನುವಾರ ನಡೆದ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಈ ಘಟನೆ ಸಂಬಂಧ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.