ADVERTISEMENT

ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ಕುರ್ಚಿಗಾಗಿ ಕಿತ್ತಾಡಿದ ಕಾಂಗ್ರೆಸ್‌ ನಾಯಕರು

ತೆಲಂಗಾಣ

​ಪ್ರಜಾವಾಣಿ ವಾರ್ತೆ
Published 11 ಮೇ 2019, 18:28 IST
Last Updated 11 ಮೇ 2019, 18:28 IST

ಹೈದರಾಬಾದ್‌: ತೆಲಂಗಾಣ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಈಚೆಗೆ ಇಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕಾಂಗ್ರೆಸ್‌ ನಾಯಕರಿಬ್ಬರು ಕುರ್ಚಿಗಾಗಿ ಕಿತ್ತಾಟ ನಡೆಸಿರುವ ದೃಶ್ಯವಿರುವ ವಿಡಿಯೊ ವೈರಲ್‌ ಆಗಿದೆ.

ಕಾಂಗ್ರೆಸ್‌ನ ಹಿರಿಯ ಮುಖಂಡ ವಿ. ಹನುಮಂತರಾವ್‌ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ (ಟಿಪಿಸಿಸಿ) ವಕ್ತಾರ ಎಂ.ನಾಗೇಶ್‌ ಅವರು ಕುರ್ಚಿಗಾಗಿ ವೇದಿಕೆಯಲ್ಲೇ ಪರಸ್ಪರ ತಳ್ಳಾಟ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ತಳ್ಳಾಟದಲ್ಲಿ ಮೊದಲು ಕೆಳಗೆ ಬಿದ್ದ ನಾಗೇಶ್‌ ನಂತರ ಎದ್ದು ರಾವ್‌ ಅವರನ್ನೂ ತಳ್ಳಿ ಕೆಳಗೆ ಬೀಳಿಸಿದ್ದಾರೆ.

ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸಿದ ಪಿ.ಯು ಪರೀಕ್ಷೆಯ ಫಲಿತಾಂಶ ಗೊಂದಲದಿಂದ 22 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು, ಸರ್ಕಾರದ ಶಿಕ್ಷಣ ನೀತಿಯ ವಿರುದ್ಧ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದವು. ಮುಖಂಡರನ್ನು ಸ್ವಾಗತಿಸಲು ಹನುಮಂತರಾವ್‌ ಮೈಕ್‌ ಹಿಡಿದುಕೊಂಡಿದ್ದಾಗ ಅವರ ಕುರ್ಚಿಯನ್ನು ನಾಗೇಶ್‌ ಎಳೆದುಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.