ADVERTISEMENT

ತೆಲಂಗಾಣ: ಕೆಸಿಆರ್‌ ಗೆಲುವು; ಅಭಿನಂದನೆ ಸಲ್ಲಿಸಿದ ಎಚ್‌ಡಿಕೆ, ಚಂದ್ರಬಾಬು ನಾಯ್ಡು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 12:56 IST
Last Updated 11 ಡಿಸೆಂಬರ್ 2018, 12:56 IST
   

ಆಂಧ್ರ ಪ್ರದೇಶದಿಂದ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ತೆಲಂಗಾಣ ರಾಜ್ಯ ಸ್ಥಾ‍ಪನೆಯಾಗುತ್ತಿದ್ದಂತೆ ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯ ಕೆ.ಚಂದ್ರಶೇಖರ್‌ ರಾವ್ ಎರಡನೇ ಬಾರಿಗೆ ಸರ್ಕಾರ ರಚನೆ ಮಾಡಲಿದ್ದಾರೆ.

ಗಾಜ್ವೆಲ್‌ ವಿಧಾನಸಭಾ ಕ್ಷೇತ್ರದಿಂದ ಸುಮಾರು 50 ಸಾವಿರ ಮತಗಳ ಅಂತರದಿಂದ ಚಂದ್ರಶೇಖರ್‌ ರಾವ್‌ ಗೆಲುವು ಸಾಧಿಸಿದ್ದಾರೆ. ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣಾ ಕಣಕ್ಕೆ ಇಳಿದ ಕೆಸಿಆರ್, 2014ರ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಕೆಂಗುಲಾಬಿಯನ್ನು ವಿಸ್ತರಿಸುವಲ್ಲಿ ಸಫಲರಾಗಿದ್ದಾರೆ. 85 ಸ್ಥಾನಗಳಲ್ಲಿ ಟಿಆರ್‌ಎಸ್‌ ಬಾವುಟ ಹಾರಾಡುವುದು ಬಹುತೇಕ ಖಚಿತಾಗಿದ್ದು, ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮುಖಂಡ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟ್ವೀಟ್‌ ಮಾಡಿ ಅಭಿನಂದಿಸಿದ್ದಾರೆ.

’ತೆಲಂಗಾಣದಲ್ಲಿ ವಿಧಾನಸಭೆಯಲ್ಲಿ ಗೆಲುವು ಸಾಧಿಸಿದ ಕೆಸಿಆರ್‌ ಗಾರು ಶುಭಾಶಯಗಳು’ ಎಂದಿದ್ದಾರೆ.

ADVERTISEMENT

ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಟಿಆರ್‌ಎಸ್‌ ಕಚೇರಿಯಲ್ಲಿ ಸಂಭ್ರಮ ಮಾಡಿದೆ. ಕೆಸಿಆರ್‌ ಪುತ್ರ ಕೆಟಿ ರಾಮ ರಾವ್‌, ಸೇವೆ ಸಲ್ಲಿಸಲು ಟಿಆರ್‌ಎಸ್‌ಗೆ ಮತ್ತೊಂದು ಅವಕಾಶ ನೀಡಿದ ತೆಲಂಗಾಣದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಕೆಟಿಆರ್‌ ಎಂದೇ ಕರೆಸಿಕೊಳ್ಳುವ ಅವರು ಕೆಸಿಆರ್‌ ಸಂಪುಟದಲ್ಲಿ ಸಚಿವ ಸ್ಥಾನದಲ್ಲಿದ್ದರು.

ಕೆಸಿಆರ್‌ ಹಾಗೂ ಅವರ ಟಿಆರ್‌ಎಸ್‌ ಪಕ್ಷದ ಗೆಲುವಿಗೆ ದೇಶದ ಹಲವು ಮುಖಂಡರು ಅಭಿನಂದಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕರೆ ಮಾಡಿದ್ದಾಗಿ ತಿಳಿದು ಬಂದಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ವೈ.ಎಸ್‌.ಜಗಮೋಹನ್‌ ರೆಡ್ಡಿ ಸೇರಿ ಹಲವು ಅಭಿನಂದಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.