ADVERTISEMENT

ಶ್ರೀಕಾಕುಳಂ ಕಾಲ್ತುಳಿತ: ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಪಿಟಿಐ
Published 2 ನವೆಂಬರ್ 2025, 9:30 IST
Last Updated 2 ನವೆಂಬರ್ 2025, 9:30 IST
   

ಕಾಸಿಬುಗ್ಗಾ (ಆಂಧ್ರಪ್ರದೇಶ): ಕಾಲ್ತುಳಿತ ಘಟನೆ ಬಳಿಕ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಉಂಟಾದ ಕಾಲ್ತುಳಿತದಲ್ಲಿ 9 ಮಹಿಳೆಯರು ಹಾಗೂ 13 ವರ್ಷದ ಬಾಲಕ ಸೇರಿ ಒಟ್ಟು 10 ಜನರು ಮೃತಪಟ್ಟಿದ್ದಾರೆ. ಈ ಅವಘಡದಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುರಂತದ ಹಿನ್ನೆಲೆ ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಶ್ರೀಕಾಕುಳಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಮಹೇಶ್ವರ ರೆಡ್ಡಿ ತಿಳಿಸಿದ್ದಾರೆ.

ADVERTISEMENT

ಕಾಸಿಬುಗ್ಗಾದಲ್ಲಿ ನಿರ್ಮಿಸಲಾಗಿರುವ ಈ ದೇವಸ್ಥಾನವನ್ನು ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಘಾಟಿಸಲಾಗಿದೆ. ಖಾಸಗಿ ಟ್ರಸ್ಟ್‌ ಈ ದೇವಸ್ಥಾನದ ನಿರ್ವಹಣೆ ಮಾಡುತ್ತಿದೆ. ಈ ಭಾಗದಲ್ಲಿ ಈ ದೇಗುಲವನ್ನು ‘ಚಿನ್ನ ತಿರುಪತಿ’ (ಚಿಕ್ಕ ತಿರುಪತಿ) ಎಂದೇ ಕರೆಯುತ್ತಾರೆ. ಕಾರ್ತಿಕ ಮಾಸದ ಮೊದಲ ಏಕಾದಶಿ ಅಂಗವಾಗಿ ಶನಿವಾರ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ವೇಳೆ ಉಂಟಾದ ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ಕಾರಣ ಏನು?

ಕಾರ್ತಿಕ ಮಾಸದ ಮೊದಲ ಏಕಾದಶಿ ಪ್ರಯುಕ್ತ ಶನಿವಾರ ನಸುಕಿನಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದಾರೆ. 2 ಸಾವಿರದಿಂದ 3 ಸಾವಿರದಷ್ಟು ಭಕ್ತರಿಗೆ ಅವಕಾಶವಿರುವಂತೆ ನಿರ್ಮಿಸಿರುವ ದೇವಸ್ಥಾನದಲ್ಲಿ 25 ಸಾವಿರದಷ್ಟು ಜನರು ಸೇರಿದ್ದು ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತದೆ.

‘ದೇವಸ್ಥಾನವು ಮೊದಲ ಮಹಡಿಯಲ್ಲಿದೆ. ದೇವಸ್ಥಾನದ ದ್ವಾರ ತೆರೆದಾಗ ಏಕಾಏಕಿ ಭಾರಿ ಸಂಖ್ಯೆಯಲ್ಲಿ ಜನರು ಒಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ, ಸರದಿಯಲ್ಲಿ ನಿಲ್ಲುವುದಕ್ಕೆ ಅನುಕೂಲ ಕಲ್ಪಿಸಲು ಅಳವಡಿಸಿದ್ದ ಲೋಹದ ರೇಲಿಂಗ್ ಕುಸಿದು ಬಿದ್ದಿದೆ. ಆಗ, ಮೂಲೆಯೊಂದರಲ್ಲಿ ನಿಂತಿದ್ದ ಜನರು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ’ ಎಂದು ಗೃಹ ಸಚಿವ ವಂಗಲಪುಡಿ ಅನಿತಾ ಹೇಳಿದ್ದಾರೆ. ‘ಈ ಮಧ್ಯೆ, ಜನರ ಒಂದು ಗುಂಪು ನಿರ್ಗಮನ ಮಾರ್ಗದ ಮೂಲಕ ಗರ್ಭಗುಡಿಯತ್ತ ಹೋಗಲು ಯತ್ನಿಸಿದೆ. ಮತ್ತೊಂದು ಗುಂಪು ದರ್ಶನ ಪಡೆದು ಹೊರಗೆ ಹೋಗಲು ಮುಂದಾಗಿದೆ. ಇದೇ ವೇಳೆ ರೇಲಿಂಗ್‌ ಕೂಡ ಕುಸಿದು ಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.