ದಿ ಕೇರಳ ಸ್ಟೋರಿ
ತಿರುವನಂತರಪುರ: ‘ದಿ ಕೇರಳ ಸ್ಟೋರಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದರ ಹಿಂದೆ ಸಂಘ ಪರಿವಾರದ ರಾಜಯಕೀಯ ಅಜೆಂಡಾ ಕೆಲಸ ಮಾಡಿದೆ’ ಎಂದು ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಶನಿವಾರ ಆರೋಪಿಸಿದ್ದಾರೆ.
2023ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಶುಕ್ರವಾರ ಘೋಷಣೆಯಾಗಿದೆ. ಇದನ್ನು ತೀರ್ಪುಗಾರರ ಮುಖ್ಯಸ್ಥರೂ ಆದ ಚಿತ್ರ ನಿರ್ದೇಶಕ ಆಶುತೋಷ್ ಗೋವಾರಿಕರ್ ಇದನ್ನು ಪ್ರಕಟಿಸಿದರು.
ದಿ ಕೇರಳ ಸ್ಟೋರಿ ಚಿತ್ರದ ನಿರ್ದೇಶಕ ಸುದಿಪ್ತೊ ಸೇನ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಇದೇ ಚಿತ್ರಕ್ಕೆ ಅತ್ಯುತ್ತಮ ಛಾಹಾಗ್ರಹಣ ಪ್ರಶಸ್ತಿ ಲಭಿಸಿದೆ.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯು ಬಲವಂತದಿಂದ ಅನ್ಯ ಧರ್ಮದ ಮಹಿಳೆಯರನ್ನು ಮತಾಂತರ ಮಾಡಿ ಅವರನ್ನು ತಮ್ಮ ಕುಕೃತ್ಯಕ್ಕೆ ಬಳಸಿಕೊಳ್ಳುವ ಕಥಾವಸ್ತುವನ್ನು ಈ ಚಿತ್ರ ಹೊಂದಿತ್ತು. ಇದು ತೀವ್ರ ವಿವಾದ ಸೃಷ್ಟಿಸಿತ್ತು.
‘ಈ ಚಿತ್ರವು ಸಮಾಜದಲ್ಲಿ ಒಡಕು ಹಾಗೂ ದ್ವೇಷ ಸೃಷ್ಟಿಸುವ ಕೃತ್ಯವಾಗಿದ್ದು, ಕೇರಳಕ್ಕೆ ಮಾಡಿದ ಅವಮಾನವಾಗಿದೆ. ಯಾವುದೇ ಮಾನದಂಡಗಳನ್ನು ಅನುಸರಿಸದೇ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ಕಲಾವಿದರಾದ ಊರ್ವಷಿ ಮತ್ತು ವಿಜಯರಾಘವನ್ ಅವರಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ’ ಎಂದು ಚೆರಿಯನ್ ಹೇಳಿದ್ದಾರೆ.
‘ಚಿತ್ರದಿಂದ ಸಮಾಜಕ್ಕೆ ಯಾವುದೇ ಸಂದೇಶವಿಲ್ಲ. ಆದರೆ ಕೆಲವು ವರ್ಗಗಳನ್ನು ಸಂತುಷ್ಟಗೊಳಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗಿದೆ. ಸಂಘ ಪರಿವಾರವು ಇಂಥ ರಾಜಕೀಯದಿಂದ ದೇಶದ ಜನರಲ್ಲಿ ಭೀತಿ ಮೂಡಿಸುತ್ತಿದ್ದಾರೆ. ದೇಶದಲ್ಲಿ ಒಗ್ಗಟ್ಟು ಮೂಡಿಸಬೇಕಾದ ರಾಜಕೀಯ ಪಕ್ಷಗಳು ದೇಶವನ್ನೇ ಇಬ್ಭಾಗ ಮಾಡುತ್ತಿವೆ. ಅದಕ್ಕಾಗಿ ಇಂಥ ಸಣ್ಣ ಕೆಲಸಗಳಲ್ಲೂ ಅಜೆಂಡಾ ತೂರಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಪ್ರಶಸ್ತಿ ಘೋಷಿಸಿದ್ದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಿನಿಮಾದ ಭವ್ಯ ಪರಂಪರೆಯನ್ನೇ ತೀರ್ಪುಗಾರ ಮಂಡಳಿ ನಾಶ ಮಾಡಿದೆ ಎಂದು ಕಿಡಿಯಾಡಿದ್ದಾರೆ.
ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರೂ ಕೇಂದ್ರ ಸರ್ಕಾರದ ಈ ಕ್ರಮವನ್ನು ವಿರೋಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.