ADVERTISEMENT

ಶಾಖೋತ್ಪನ್ನ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ: ವಿದ್ಯುತ್‌ ಅಭಾವ?

ರಾಜ್ಯದ ನಾಲ್ಕೂ ಶಾಖೋತ್ಪನ್ನ ಸ್ಥಾವರಗಳಲ್ಲಿ ದಾಸ್ತಾನು ಸ್ಥಿತಿ ಚಿಂತಾಜನಕ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 17:59 IST
Last Updated 19 ಏಪ್ರಿಲ್ 2022, 17:59 IST
   

ನವದೆಹಲಿ:ಬೇಸಿಗೆಯಲ್ಲಿ ಪ್ರತಿದಿನವೂ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿದೆ. ಆದರೆ, ಕರ್ನಾಟಕವೂ ಸೇರಿ ದೇಶದಾದ್ಯಂತ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆಯ ಹಲವು ಸ್ಥಾವರಗಳು ಕಲ್ಲಿದ್ದಲಿನ ತೀವ್ರ ಕೊರತೆ ಎದುರಿಸುತ್ತಿವೆ.

ಏಪ್ರಿಲ್ 18ರಂದು ದೇಶದಲ್ಲಿನ ಕಲ್ಲಿದ್ದಲು ದಾಸ್ತಾನು ಕುರಿತುಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ (ಸಿಇಎ) ನೀಡಿರುವ ವರದಿಯ ಪ್ರಕಾರ,ದೇಶದ ಒಟ್ಟು 173 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಪೈಕಿ 100ರಲ್ಲಿ ಕಲ್ಲಿದ್ದಲಿನ ಕೊರತೆ ತೀವ್ರವಾಗಿದೆ. ಸ್ಥಾವರದ ಸಾಮಾನ್ಯ ದಾಸ್ತಾನಿಗೆ ಹೋಲಿಸಿದಾಗ ಶೇ 25ಕ್ಕಿಂತ ಕಡಿಮೆ ಕಲ್ಲಿದ್ದಲು ದಾಸ್ತಾನು ಇದ್ದರೆ ಆ ಸ್ಥಾವರವು ಚಿಂತಾ ಜನಕ ಸ್ಥಿತಿಯಲ್ಲಿದೆ ಎಂದುಸಿಇಎ ಗುರುತಿಸುತ್ತದೆ.

ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿನ ಒಟ್ಟು ಕಲ್ಲಿದ್ದಲು ಸಾಮಾನ್ಯ ದಾಸ್ತಾನು 66.72ದಶಲಕ್ಷ ಟನ್‌. ಆದರೆ, ಸದ್ಯ ಇರುವುದು 22.52 ದಶ ಲಕ್ಷ ಟನ್‌. ಇದು ಸಾಮಾನ್ಯ ದಾಸ್ತಾನಿಗೆ ಹೋಲಿಸಿದರೆ ಕೇವಲ ಶೇ 34 ಎಂದು ಸಿಇಎ ವರದಿ ಹೇಳಿದೆ.

ADVERTISEMENT

ಎನ್‌ಟಿಪಿಸಿ ನಿರ್ವಹಣೆಯ ಕೂಡಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸೇರಿಕರ್ನಾಟಕದ ಎಲ್ಲ 4 ಶಾಖೋತ್ಪನ್ನ ವಿದ್ಯುತ್ ಸ್ಥಾವರ
ಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಲ್ಲಿದ್ದಲು ದಾಸ್ತಾನು ಇದೆ. ಇವುಗಳನ್ನು ತೀವ್ರ ಚಿಂತಾಜನಕ ಸ್ಥಿತಿಯಲ್ಲಿರುವ ಸ್ಥಾವರಗಳೆಂದು ಗುರುತಿಸಿದೆ. ರಾಜ್ಯ ಸರ್ಕಾರ ನಿರ್ವಹಿಸುತ್ತಿರುವ3 ಸ್ಥಾವರಗಳು ಕೇವಲ 1.87 ಲಕ್ಷ ಟನ್ ಕಲ್ಲಿದ್ದಲು ದಾಸ್ತಾನು ಹೊಂದಿವೆ. ಇವುಗಳಲ್ಲಿ ಸಾಮಾನ್ಯ ದಾಸ್ತಾನು16.99 ಲಕ್ಷ ಟನ್ ಇರ ಬೇಕಿತ್ತು. ಕೇವಲ ಶೇ 11ರಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಶೇ 13ರಷ್ಟು ದಾಸ್ತಾನು ಇದ್ದರೆ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಶೇ 11ರಷ್ಟು ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಶೇ 9ರಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಮೂರು ವಿದ್ಯುತ್ ಸ್ಥಾವರಗಳು ಪ್ರತಿದಿನ 60,000 ಟನ್ ಕಲ್ಲಿದ್ದಲು ಪಡೆಯುತ್ತಿವೆ. ಆದರೆ, 37,000 ಟನ್ ಮಾತ್ರ ಬಳಸಿಕೊಳ್ಳುತ್ತಿವೆ ಎಂದುವರದಿ ಹೇಳಿದೆ.

ಎನ್‌ಟಿ‍ಪಿಸಿ ನಿರ್ವಹಣೆಯಲ್ಲಿರುವ ಕೂಡಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರವು ಕೇವಲ 60,000 ಟನ್‌ ದಾಸ್ತಾನು ಹೊಂದಿದೆ. ಇದರ ಸಾಮಾನ್ಯ ದಾಸ್ತಾನು 7.99 ಲಕ್ಷ ಟನ್‌. ಸದ್ಯ ಈ ಸ್ಥಾವರದಲ್ಲಿರುವ ಕಲ್ಲಿದ್ದಲಿನ ದಾಸ್ತಾನು ಪ್ರಮಾಣ ಶೇ 8 ಮಾತ್ರ. ಕಲ್ಲಿದ್ದಲಿನ ಕೊರತೆ ನೀಗಿಸಲು ಎನ್‌ಟಿಪಿಸಿ, ಕಲ್ಲಿ ದ್ದಲು ಸಾಗಾಟದ ರೈಲುಗಳನ್ನು ಒಂದು ಸ್ಥಾವರದಿಂದ ಮತ್ತೊಂದು ಸ್ಥಾವರಕ್ಕೆ ಕಳುಹಿಸುತ್ತಿದೆ ಎಂದು ಸಿಇಎ ತಿಳಿಸಿದೆ.

ಖಾಸಗಿ ವಿದ್ಯುತ್ ಸ್ಥಾವರಗಳ ಪೈಕಿ ಉಡುಪಿ ಶಾಖೋತ್ಪನ್ನ ವಿದ್ಯುತ್ ಸ್ಥಾವರವು ಶೇ 17ರಷ್ಟು ಕಲ್ಲಿದ್ದಲು ದಾಸ್ತಾನು ಹೊಂದಿದ್ದರೆ, ತೋರಣಗಲ್ಲು ಸ್ಥಾವರದ ದಾಸ್ತಾನು ಶೂನ್ಯವಾಗಿದೆ. ತೋರಣಗಲ್ಲು ಟಿಪಿಎಸ್‌ ಶೇ 71ರಷ್ಟು ದಾಸ್ತಾನು ಹೊಂದಿದೆ. ಈ ಸ್ಥಾವರಗಳು ಆಮದು ಕಲ್ಲಿದ್ದಲಿನಿಂದ ಕಾರ್ಯ ನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.