ನವದೆಹಲಿ: ಮಿತಿ ಮೀರುತ್ತಿರುವ ವಾಯು ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ ವಲಯ (ಎನ್ಸಿಆರ್)ದ ನಿವಾಸಿಗಳಲ್ಲಿ ಮನೆಮಾಡಿದ್ದ ‘ದೀಪಾವಳಿ ಪಟಾಕಿ’ಗಳ ಭಯವು ಹಬ್ಬದ ದಿನ ಕೊಂಚ ಮಟ್ಟಿಗೆ ದೂರವಾಗಿದೆ.
ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿನ ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿ ಪೊಲೀಸರು ಕೈಗೊಂಡ ದಿಟ್ಟ ಕ್ರಮಗಳಿಂದಾಗಿ ಮಂಗಳವಾರ ಆಚರಿಸಲಾದ ‘ಛೋಟಿ ದಿವಾಲಿ’ (ಸಣ್ಣ ದೀಪಾವಳಿ) ಹಾಗೂ ಬುಧವಾರದ ‘ಬಡೀ ದಿವಾಲಿ’ (ದೊಡ್ಡ ದೀಪಾವಳಿ)ಯಂದು ಉಳ್ಳವರು ನಿರೀಕ್ಷೆಯ ಪ್ರಮಾಣದಲ್ಲಿ ಪಟಾಕಿ ಹಾರಿಸದ್ದರಿಂದ ಜನರಲ್ಲಿ ನಿರಾಳಭಾವ ಮೂಡಿದೆ.
ಕಳೆದ ಸೋಮವಾರ ಇಲ್ಲಿನ ಒಂದು ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಪ್ರಮಾಣ 846ರಷ್ಟು ದಾಖಲಾಗಿ 30 ಪಟ್ಟು ಅಧಿಕ ಪ್ರಮಾಣದಲ್ಲಿತ್ತು. ಆದರೆ, ಕಳೆದೆರಡು ದಿನಗಳಿಂದ ಇಬ್ಬನಿ ಪ್ರಮಾಣ ತಗ್ಗಿ, ವೇಗವಾಗಿ ಗಾಳಿಯೂ ಬೀಸಿದ್ದರಿಂದ ವಾಯು ಮಾಲಿನ್ಯವೂ ಕಡಿಮೆಯಾಗಿದೆ. ಹೊಂಜಿನ ಜೊತೆಗೆ ಪಟಾಕಿಯ ವಿಷಕಾರಕ ಹೊಗೆಯೂ ಸೇರಿದ್ದರೆ ಜನರು ಉಸಿರಾಟದ ತೀವ್ರ ತೊಂದರೆಗೆ ಒಳಗಾಗುವ ಸಾಧ್ಯತೆ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.