ADVERTISEMENT

ಪ್ರತಿ ತಿಂಗಳ 3ರಂದು ‘ಲಖಿಂಪುರ ಕಿಸಾನ್‌ ಸ್ಮರಣೆ ದಿವಸ’ ಆಚರಣೆ: ಸಮಾಜವಾದಿ ಪಕ್ಷ

ಪಿಟಿಐ
Published 2 ನವೆಂಬರ್ 2021, 6:03 IST
Last Updated 2 ನವೆಂಬರ್ 2021, 6:03 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ಅಕ್ಟೋಬರ್‌ 3 ರಂದು ಲಖಿಂಪುರ–ಖೇರಿ ಹಿಂಸಾಚಾರ ಮತ್ತು ಬಿಜೆಪಿಯ ಕ್ರೌರ್ಯದ ಬಗ್ಗೆ ಜನರಿಗೆ ನೆನಪಿಸಲು ಪ್ರತಿ ತಿಂಗಳ 3ರಂದು ‘ಲಖಿಂಪುರ ಕಿಸಾನ್‌ ಸ್ಮರಣೆ ದಿವಸ’ ಎಂದು ಆಚರಿಸುವಂತೆ ಸಮಾಜವಾದಿ ಪಕ್ಷವು (ಎಸ್‌ಪಿ) ಮಂಗಳವಾರ ತನ್ನ ಎಲ್ಲಾ ಕಾರ್ಯಕರ್ತರು ಮತ್ತು ಮಿತ್ರರಿಗೆ ಕರೆ ನೀಡಿದೆ.

ಹಿಂಸಾಚಾರದಲ್ಲಿ ಮೃತಪಟ್ಟ ಎಂಟು ಜನರ ಪೈಕಿ ನಾಲ್ವರು ರೈತರು. ಬಿಜೆಪಿ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ವಾಹನ ಇದ್ದಕ್ಕಿದ್ದಂತೆ ಬಂದು ಗುದ್ದಿದ ಪರಿಣಾಮ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಇತರರು ಸಾವವನ್ನಪ್ಪಿದರು. ಇದರಿಂದ ಕುಪಿತಗೊಂಡ ರೈತರು ವಾಹನದಲ್ಲಿದ್ದ ಕೆಲವರನ್ನು ಥಳಿಸಿದ್ದರು. ಮೃತರಲ್ಲಿ ರೈತರನ್ನು ಹೊರತುಪಡಿಸಿ ಇಬ್ಬರು ಬಿಜೆಪಿ ಕಾರ್ಯಕರ್ತರು, ವಾಹನದ ಚಾಲಕ ಮತ್ತು ಪತ್ರಕರ್ತ ಇದ್ದರು.

ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಷಿಶ್‌ ಮಿಶ್ರಾ ವಾಹದಲ್ಲಿದ್ದರು ಎಂದು ರೈತರು ಆರೋಪಿಸಿದ್ದರು. ಆದರೆ ಇದನ್ನು ಸಚಿವರು ಮತ್ತು ಅವರ ಪುತ್ರ ನಿರಾಕರಿಸಿದ್ದರು.

ADVERTISEMENT

‘ಬಿಜೆಪಿಯ ಕ್ರೌರ್ಯವನ್ನು ಜನರಿಗೆ ನೆನಪಿಸಲುಎಲ್ಲಾ ಉತ್ತರ ಪ್ರದೇಶದ ನಿವಾಸಿಗಳು, ರೈತರ ಹಿತೈಷಿಗಳು, ಎಸ್‌ಪಿ ಕಾರ್ಯಕರ್ತರು ಮತ್ತು ಮಿತ್ರ ಪಕ್ಷಗಳು ಪ್ರತಿ ತಿಂಗಳ 3ರಂದು ‘ಲಖಿಂಪುರ ಕಿಸಾನ್‌ ಸ್ಮರಣ ದಿವಸ’ ಎಂದು ಆಚರಿಸುವಂತೆ ಮನವಿ ಮಾಡಲಾಗಿದೆ’ ಎಂದು ಸಮಾಜವಾದಿ ಪಕ್ಷ ಟ್ವೀಟ್‌ ಮಾಡಿದೆ.

ನವೆಂಬರ್‌ 3ರ ದೀಪಾವಳಿಯಂದು ರೈತರಿಗೆ ಗೌರವ ಸಲ್ಲಿಸಲು ಪ್ರತಿಯೊಬ್ಬರೂ ಮಣ್ಣಿನ ದೀಪವೊಂದನ್ನು ಬೆಳಗಬೇಕು ಎಂದೂ ಅದು ಹೇಳಿದೆ.

ಲಿಖಿಂಪುರ–ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಆಶಿಶ್‌ ಮಿಶ್ರಾ ಸೇರಿದಂತೆ ಹಲವು ಆರೋಪಿಗಳು ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.