ಕೇಂದ್ರ ಸಚಿವ ಕಿರಣ್ ರಿಜಿಜು
ತಿರುವನಂತಪುರಂ: ನೂತನ ಶಿಕ್ಷಣ ಕಾಯ್ದೆ(ಎನ್ಇಪಿ)ಯಲ್ಲಿರುವ ತ್ರಿಭಾಷಾ ಸೂತ್ರದಿಂದ ಇಡಿ ದೇಶಕ್ಕೆ ಒಳಿತಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದಾರೆ.
ಎನ್ಇಪಿಯಲ್ಲಿರುವ ತ್ರಿಭಾಷಾ ಸೂತ್ರದ ಬಗ್ಗೆ ನಡೆಯುತ್ತಿರುವ ಗಂಭೀರ ಚರ್ಚೆ ಮತ್ತು ದಕ್ಷಿಣ ರಾಜ್ಯಗಳ ವಿರೋಧದ ಕುರಿತು ಗುರುವಾರ ಪ್ರತಿಕ್ರಿಯಿಸಿದ ಸಚಿವರು, ಇಲ್ಲಿ ಕೆಲ ತಪ್ಪು ತಿಳಿವಳಿಕೆ ಆಗಿವೆ ಮತ್ತು ಕೆಲವರು ಇದನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಕೇರಳದ ತಿರುವನಂತಪುರಂನಲ್ಲಿ ಪ್ರಧಾನ ಮಂತ್ರಿ ಜನವಿಕಾಸ್ ಕಾರ್ಯಕ್ರಮ(ಪಿಎಂಜೆವಿಕೆ) ಕುರಿತ ದಕ್ಷಿಣ ಭಾಗದ ರಾಜ್ಯಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ರಿಜಿಜು ಆಗಮಿಸಿದ್ದರು.
‘ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ, ಶಿಕ್ಷಣ ಸಚಿವರ ಮಾತೃಭಾಷೆ ಒಡಿಯಾ, ನನ್ನ ಮಾತೃಭಾಷೆ ಅರುಣಾಚಲಿ. ನಾವು ದೇಶದ ಹಿತಕ್ಕಾಗಿ ಒಂದು ತಂಡದಂತೆ ಕೆಲಸ ಮಾಡುತ್ತಿದ್ದೇವೆ’.
ಧರ್ಮ, ಜಾತಿ, ಮತ, ಪ್ರದೇಶ ಅಥವಾ ಭಾಷೆಯ ಆಧಾರದ ಮೇಲೆ ದೇಶವನ್ನು ಯಾರೂ ವಿಭಜನೆ ಮಾಡಬಾರದು ಎಂದು ರಿಜಿಜು ಹೇಳಿದರು.
ನೂತನ ಶಿಕ್ಷಣ ನೀತಿಯು ಹಿಂದಿ ಹೇರಿಕೆಯ ಹುನ್ನಾರ. ₹10 ಸಾವಿರ ಕೋಟಿ ಅನುದಾನ ಕೊಟ್ಟರೂ ಎನ್ಇಪಿ ಜಾರಿ ಮಾಡಲ್ಲೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.