ಪಿಲಿಭಿತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಮಲದಗುಂಡಿ ಸ್ವಚ್ಛಗೊಳಿಸುವಾಗ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಪ್ರಹ್ಲಾದ್ ಮಂಡಲ್(60), ಅವರ ಮಗಳು ತನು ವಿಶ್ವಾಸ್(32) ಮತ್ತು ಅವರ ಅಳಿಯ ಕಾರ್ತಿಕ್ ವಿಶ್ವಾಸ್(38) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಹಳೆಯ, ಸಣ್ಣದಾದ ಮಲದಗುಂಡಿಯಲ್ಲಿ ಕೆಲವು ಸಮಸ್ಯೆಗಳು ತಲೆದೋರಿದ ನಂತರ ಸುಮಾರು 8 ಅಡಿ ಆಳದ ಹೊಸ ಮಲದಗುಂಡಿಯನ್ನು ನಿರ್ಮಿಸಿದ್ದರು. ತಮ್ಮ ಮಗಳು ಮತ್ತು ಅಳಿಯನೊಂದಿಗೆ ಮಂಡಲ್ ಮಲದಗುಂಡಿ ಸ್ವಚ್ಛಗೊಳಿಸಲು ಇಳಿದಿದ್ದರು ಎಂದು ಮಧೋತಾಂಡ ಠಾಣಾಧಿಕಾರಿ ಅಶೋಕ್ ಪಾಲ್ ತಿಳಿಸಿದ್ದಾರೆ.
ಈ ಸಂದರ್ಭ ಪಕ್ಕದ ಹಳೆಯ ಮಲದಗುಂಡಿಯಿಂದ ಅನಿಲ ಸೋರಿಕೆಯಾಗಲು ಪ್ರಾರಂಭಿಸಿದೆ ಎಂದು ತೋರುತ್ತದೆ. ಹೊಸ ಟ್ಯಾಂಕ್ ಆಳವಾಗಿದ್ದರಿಂದಾಗಿ, ಮೂವರು ಹೊರಬರಲು ಸಾಧ್ಯವಾಗದೆ ಸ್ಥಳದಲ್ಲೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತನು ವಿಶ್ವಾಸ್ ತನ್ನ ಪತಿ ಕಾರ್ತಿಕ್ ಮತ್ತು ಅವರ ಮಕ್ಕಳೊಂದಿಗೆ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಳು. ಕಾರ್ತಿಕ್ ಹತ್ತಿರದ ಮೈನಿಗುಲ್ರಿಯಾ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ನಂತರ ಕಲಿನಗರ ತಹಶೀಲ್ದಾರ್ ವೀರೇಂದ್ರ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಅವರ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.