ನವದೆಹಲಿ: ಕಳ್ಳಬೇಟೆಯಿಂದಾಗಿ ಹುಲಿಗಳು ಸಾಯುವ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಆದರೆ ಇದೇ ಅವಧಿಯಲ್ಲಿ ಆನೆಗಳ ಸಾವಿನ ಪ್ರಮಾಣ ಹೆಚ್ಚಿದೆ ಎಂದುಕೇಂದ್ರ ಪರಿಸರ ಸಚಿವಾಲಯವು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ.
‘ಕಳೆದ ಮೂರು ವರ್ಷಗಳಲ್ಲಿ 58 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿವೆ. 2020ರಲ್ಲಿ 7, 2019ರಲ್ಲಿ 17 ಮತ್ತು 2018ರಲ್ಲಿ 34 ಹುಲಿಗಳು ಸತ್ತಿದ್ದವು’ ಎಂದುಸದನದಲ್ಲಿ ಕೇಳಿದ ಪ್ರಶ್ನೆಗೆ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಉತ್ತರಿಸಿದ್ದಾರೆ.
ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೊದ (ಡಬ್ಲ್ಯುಸಿಸಿಬಿ) ಅಂಕಿಅಂಶಗಳನ್ನು ಹಂಚಿಕೊಂಡ ಅವರು, 2020-21ರಲ್ಲಿ ಕಳ್ಳಬೇಟೆಯಿಂದಾಗಿ14 ಆನೆಗಳು ಸಾವಿಗೀಡಾಗಿವೆ. 2019-20ರಲ್ಲಿ 6 ಮತ್ತು 2018-2019ರಲ್ಲಿ 9 ಆನೆಗಳು ಸಾವಿಗೀಡಾಗಿವೆ. ಅಂತೆಯೇ, ಕಳೆದ ಮೂರು ವರ್ಷಗಳಲ್ಲಿ ಒಟ್ಟು 222 ಆನೆಗಳು ವಿದ್ಯುದಾಘಾತದಿಂದ ಸಾವನ್ನಪ್ಪಿದ್ದು, 2020-21ರಲ್ಲಿ 65, 2019-20ರಲ್ಲಿ 76 ಮತ್ತು 2018-19ರಲ್ಲಿ 81 ಆನೆಗಳು ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದಾರೆ.
ಗಣತಿ ಪ್ರಕಾರ ದೇಶದಲ್ಲಿ 2,967 ಹುಲಿಗಳು ಮತ್ತು 27 ಸಾವಿರ ಆನೆಗಳಿರುವುದನ್ನು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.