ಹೈದರಾಬಾದ್: ಕೊರೊನಾ ವೈರಸ್ ಸೋಂಕು ಹರಡುವುದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಮುಚ್ಚಲು ನಿರ್ಧರಿಸಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ (ಟಿಟಿಡಿ) ಮುಖ್ಯಸ್ಥ ವೈ.ವಿ.ಸುಬ್ಬಾ ರೆಡ್ಡಿ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.ದೇವಾಲಯಕ್ಕೆ ಮಹಾರಾಷ್ಟ್ರದಿಂದ ಬಂದಿದ್ದ ಭಕ್ತರೊಬ್ಬರು ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಒಂದು ವಾರದ ವರೆಗೂ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿರಾಕರಿಸಲಾಗಿದೆ. ಪ್ರತಿ ದಿನವೂ ಪರಿಸ್ಥಿತಿಯ ಪರಿಶೀಲನೆ ನಡೆಸಲಾಗುತ್ತದೆ.1892ರಲ್ಲಿ ದೇವಸ್ಥಾನ ಎರಡು ದಿನಗಳ ವರೆಗೂ ಮುಚ್ಚಲಾಗಿತ್ತು.
ತಿರುಚನೂರು ಪದ್ಮಾವತಿ ದೇವಾಲಯವನ್ನೂ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ.
'ಕಳೆದ ಕೆಲವು ದಿನಗಳಿಂದಲೂ ದೇವಸ್ಥಾನಕ್ಕೆ ಬರುವುದನ್ನು ತಪ್ಪಿಸುವಂತೆ ಭಕ್ತಾದಿಗಳಲ್ಲಿ ಮನವಿ ಮಾಡುತ್ತಿದ್ದೇವೆ. ಈಗ ದೇವಸ್ಥಾನವನ್ನೇ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ನಿತ್ಯದ ಪೂಜಾಕಾರ್ಯಗಳನ್ನು ಅರ್ಚಕರು ನೆರವೇರಿಸಲಿದ್ದಾರೆ' ಎಂದಿದ್ದಾರೆ.
ಪ್ರಸ್ತುತ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾಆಸ್ಪತ್ರೆಯಲ್ಲಿ ಮಹಾರಾಷ್ಟ್ರದ ಭಕ್ತ, ಸುಮಾರು 100 ಮಂದಿ ಯಾತ್ರಾರ್ಥಿಗಳೊಂದಿಗೆ ಬಂದಿದ್ದಾರೆ. ಅವರೆಲ್ಲರೂ ದೇಶದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ತಿರುಪತಿಗೆ ಬಂದಿದ್ದಾರೆ. ಭಕ್ತಾದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ತಿರುಮಲ ದೇವಸ್ಥಾನದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿರುವುದನ್ನು ಪತ್ತೆ ಮಾಡುವುದಕ್ಕಿಂತಲೂ ಮುನ್ನ, ಇಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿಹಲವು ಯಾತ್ರಾರ್ಥಿಗಳೊಂದಿಗೆ ಸಂಪರ್ಕಕ್ಕೆ ಒಳಗಾಗಿರುವುದು ಚಿಂತೆಗೀಡು ಮಾಡಿದೆ. ಆ ಎಲ್ಲರನ್ನೂ ಗುರುತಿಸಿ ಅವರ ಮೇಲೆ ನಿಗಾ ವಹಿಸಬೇಕಾಗಿ ಬರಬಹುದು.
ನಿತ್ಯ ತಿರುಮಲ ದೇವಾಲಯಕ್ಕೆ 75,000ದಿಂದ 90,000 ಯಾತ್ರಿಕರು ಬರುತ್ತಾರೆ. ದೇವಾಲಯಕ್ಕೆ ಬರುವುದನ್ನು ತಪ್ಪಿಸುವಂತೆ ಮನವಿ ಮಾಡಿದ ಬಳಿಕ ನಿತ್ಯ 30,000 ಭಕ್ತಾದಿಗಳು ಬಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.