ಎಂ.ಕೆ. ಸ್ಟಾಲಿನ್– ಪಿಟಿಐ ಚಿತ್ರ
ಚೆನ್ನೈ: ‘ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಾನು ರಾಜನೆಂದು ಭಾವಿಸಿಕೊಂಡು ದುರಹಂಕಾರದಿಂದ ಮಾತನಾಡಿದ್ದಾರೆ. ಅವರು ತಮ್ಮ ನಾಲಿಗೆಯನ್ನು ಬಿಗಿಹಿಡಿದು ಮಾತನಾಡಲಿ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಹರಿಹಾಯ್ದಿದ್ದಾರೆ.
ತಮಿಳುನಾಡು ಸರ್ಕಾರವು ಕೇಂದ್ರದ ‘ಪಿಎಂ ಶ್ರೀ’ ಯೋಜನೆಯನ್ನು ಅನುಷ್ಠಾನಗೊಳಿಸುವುದಿಲ್ಲ. ಈ ವಿಷಯದಲ್ಲಿ ಯಾರೂ ತಮ್ಮನ್ನು ಮನವೊಲಿಸಲು ಸಾಧ್ಯವಿಲ್ಲ ಎಂದು ಸ್ಟಾಲಿನ್ ಖಡಕ್ ಆಗಿ ಹೇಳಿದ್ದಾರೆ.
‘ನೀವು ನಮ್ಮಿಂದ ಸಂಗ್ರಹಿಸಿರುವ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳಿಗಾಗಿ ಮೀಸಲಾದ ನಿಧಿಯನ್ನು ಬಿಡುಗಡೆ ಮಾಡುತ್ತೀರೊ ಅಥವಾ ಇಲ್ಲವೊ ಉತ್ತರಿಸಿ’ ಎಂದು ಸ್ಟಾಲಿನ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಹೊಸ ಶಿಕ್ಷಣ ನೀತಿ, ತ್ರಿಭಾಷಾ ನೀತಿ ಮತ್ತು ಪಿಎಂ ಶ್ರೀ ಯೋಜನೆ ಒಡಂಬಡಿಕೆಯನ್ನು ತಮಿಳುನಾಡು ತಿರಸ್ಕರಿಸಿರುವುದಕ್ಕೆ ವಿವರಣೆ ನೀಡಿ ಪ್ರಧಾನ್ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿ, ‘ಡಿಎಂಕೆ ಸರ್ಕಾರವು, ನಾಗ್ಪುರದ ಮಾತುಗಳಿಗೆ ಕಟಿಬದ್ಧವಾಗಿರುವ ಬಿಜೆಪಿ ನಾಯಕರಿಗಿಂತ ಭಿನ್ನವಾಗಿ ಜನರ ಅಭಿಪ್ರಾಯಗಳನ್ನು ಗೌರವಿಸುವ ಮೂಲಕ ಕಾರ್ಯನಿರ್ವಹಿಸಿದೆ’ ಎಂದು ಸ್ಟಾಲಿನ್ ತಿರುಗೇಟು ನೀಡಿದ್ದಾರೆ.
ಡಿಎಂಕೆ ಸಂಸದರನ್ನು ಗುರಿಯಾಗಿಸಿ ಪ್ರಧಾನ್ ಅವರು ಬಳಸಿದ್ದ ಪದಕ್ಕೆ ತಿರುಗೇಟು ನೀಡಿರುವ ಅವರು, ‘ಕೇಂದ್ರ ಸಚಿವರು ಹಣ ಬಿಡುಗಡೆ ಮಾಡದೆ ತಮಿಳುನಾಡಿಗೆ ವಂಚಿಸಿದ್ದಾರೆ. ನೀವು ತಮಿಳುನಾಡಿನ ಜನರನ್ನು ಅವಮಾನಿಸುತ್ತಿದ್ದೀರಿ. ಪ್ರಧಾನಿ ಮೋದಿ ಇದನ್ನು ಒಪ್ಪುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.