ADVERTISEMENT

ಉತ್ತರಪ್ರದೇಶ: ಐವರು ಅಪಹರಣಕಾರರ ಬಂಧನ

ಪಿಟಿಐ
Published 25 ಜುಲೈ 2020, 6:34 IST
Last Updated 25 ಜುಲೈ 2020, 6:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ವರ್ತಕರೊಬ್ಬರ ಆರು ವರ್ಷದ ಮೊಮ್ಮಗನನ್ನು ಅಪಹರಿಸಿ, ನಾಲ್ಕು ಕೋಟಿ ರೂಪಾಯಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರ ತಂಡವನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ಸುರಕ್ಷಿತವಾಗಿ ಕರೆತಂದ ಘಟನೆ ಗೋಂಡ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಎಂದು ನಕಲಿ ಗುರುತುಪತ್ರಗಳನ್ನು ತಯಾರಿಸಿಕೊಂಡು, ಅಪಹರಣಕಾರರು ಮಧ್ಯಾಹ್ನ ಮಾಸ್ಕ್‌, ಸ್ಯಾನಿಟೈಸರ್‌ ಹಂಚಲು ಕರ್ನಲ್‌ಗಂಜ್‌ಗೆ ಬಂದಿದ್ದರು. ಗುಟ್ಕಾ ವ್ಯಾಪಾರಿ ರಾಜೇಶ್‌ ಕುಮಾರ್‌ ಅವರ ಆರು ವರ್ಷದ ಮೊಮ್ಮಗನನ್ನು ಅಪಹರಣಕಾರರು ತಮ್ಮ ವಾಹನದೊಳಗೆ ಎಳೆದುಕೊಂಡು ಪರಾರಿಯಾಗಿದ್ದರು. ಇದಾಗಿ ಸ್ವಲ್ಪ ಸಮಯದ ನಂತರ ಮಹಿಳೆಯೊಬ್ಬರು ಕುಟುಂಬದವರಿಗೆ ಕರೆಮಾಡಿ ನಾಲ್ಕು ಕೋಟಿ ರೂಪಾಯಿ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದರು.

ಮಾಹಿತಿ ತಿಳಿದ ಪೊಲೀಸರು, ಅಪಹರಣಕಾರರ ಪತ್ತೆಗಾಗಿ ವಿಶೇಷ ಕಾರ್ಯಪಡೆಯ ಜತೆಗೆ ಜಂಟಿ ಕಾರ್ಯಾಚರಣೆ ಆರಂಭಿಸಿದರು. ಶನಿವಾರ ಎನ್‌ಕೌಂಟರ್‌ ನಡೆಸಿ, ಐವರು ಅಪಹರಣಕಾರರನ್ನು ಬಂಧಿಸಿದ್ದಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್‌ ಅವಸ್ಥಿ ತಿಳಿಸಿದ್ದಾರೆ.

ADVERTISEMENT

ಅಪಹರಣಕ್ಕೆ ಬಳಸಿದ್ದ ಕಾರು ಹಾಗೂ ಮೂರು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಅಪಹರಣಕಾರರು ಗಾಯಗೊಂಡಿದ್ದಾರೆ. ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಎಸ್‌ಟಿಎಫ್‌ನ ಜಂಟಿ ತಂಡಕ್ಕೆ ₹2 ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.