ADVERTISEMENT

ರೈಲುಗಳು ಓಡುತ್ತವೆ.. ರಸ್ತೆ ಬದಿ ವಡಾ–ಪಾವ್‌ ಸಹ ಸಿಗಲಿವೆ: ಉದ್ಧವ್‌ ಠಾಕ್ರೆ

ಲಾಕ್‌ಡೌನ್‌ ಸದ್ಯಕ್ಕೆ‌ ಸಡಿಲಿಕೆ ಇಲ್ಲ–ಸುಳಿವು ಕೊಟ್ಟ ಮುಖ್ಯಮಂತ್ರಿ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 14:00 IST
Last Updated 25 ಜುಲೈ 2020, 14:00 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಮಹಾನಗರದ ಜೀವನಾಡಿಯಾಗಿರುವ ಉಪನಗರ ರೈಲು ಸೇವೆ ಆರಂಭವಾಗುವುದು. ರಸ್ತೆ ಬದಿಗಳಲ್ಲಿ ವಡಾ–ಪಾವ್‌ ಸವಿಯುವ ದಿನಗಳೂ ಮರುಕಳಿಸುವವು..ಇದಕ್ಕೆಲ್ಲ ಇನ್ನೂ ಸ್ವಲ್ಪ ದಿನ ಕಾಯಬೇಕು...

– ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್ ‌ಅನ್ನು ಕ್ರಮೇಣ ಸಡಿಲಿಸಲಾಗುವುದು ಎಂಬುದನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೂಚ್ಯವಾಗಿ ಹೇಳಿರುವ ಪರಿ ಇದು.

‘ರೈಲುಗಳ ಸಂಚಾರವನ್ನು ಅವಸರದಲ್ಲಿ ಆರಂಬಿಸಲಾಗುವುದಿಲ್ಲ. ಆದರೆ, ಇಂತಹ ಕ್ರಮ ಕೈಗೊಳ್ಳುವ ಮೊದಲು, ಜನರು ಕೊರೊನಾ ಸೋಂಕಿನಿಂದ ಬಳಲುವುದು ಇನ್ನೂ ನಿಂತಿಲ್ಲ ಹಾಗೂ ಎಷ್ಟೋ ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ.

ADVERTISEMENT

ಶಿವಸೇನಾ ಮುಖವಾಣಿ, ಮರಾಠಿ ದೈನಿಕ ‘ಸಾಮ್ನಾ’ ಹಾಗೂ ಈ ಪತ್ರಿಕೆಯ ಹಿಂದಿ ಅವತರಣಿಕೆ ‘ದೋಪಹರ್‌ ಕಾ ಸಾಮ್ನಾ’ದಲ್ಲಿ ಪ್ರಕಟವಾಗಿರುವ ಅವರ ಸಂದರ್ಶನದ ಮೊದಲ ಭಾಗದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

‘ಉಪನಗರ ರೈಲು ಸೇವೆಯನ್ನು ಮತ್ತೆ ಆರಂಭಿಸಲೇಬೇಕಿದೆ. ಆದರೆ, ನನ್ನೆದುರೇ ಜನರು ಸಾವನ್ನಪ್ಪವುದನ್ನು ನೋಡಲು ನಾನು ಡೊನಾಲ್ಡ್‌ ಟ್ರಂಪ್‌ ಅಲ್ಲ. ನ್ಯೂಯಾರ್ಕ್‌ ನಗರದ ಸ್ಥಿತಿ ಏನಾಗಿದೆ ನೋಡಿ’ ಎಂದು ಠಾಕ್ರೆ ಹೇಳಿದ್ದಾರೆ.

‘ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಸಲುವಾಗಿ ಲಾಕ್‌ಡೌನ್‌ ತೆರವುಗೊಳಿಸುವಂತೆ ಕೆಲವರು ವಾದ ಮಂಡಿಸುತ್ತಿದ್ದಾರೆ. ಆದರೆ, ಲಾಕ್‌ಡೌನ್‌ ಸಡಿಲಿಸಿದ ನಂತರ ಅಪಾರ ಸಂಖ್ಯೆಯಲ್ಲಿ ಜನರು ಸೋಂಕಿಗೆ ಒಳಗಾದರೆ, ಮೃತಪಟ್ಟರೆ ಆಗ ಯಾರು ಹೊಣೆ ಹೊರುತ್ತಾರೆ. ಆರ್ಥಿಕತೆ ಸುಧಾರಿಸಲಿ ಎಂಬ ಕಾರಣಕ್ಕೆ ಜನರನ್ನು ಸಾಯಲು ಬಿಡಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.