ADVERTISEMENT

ಬೇಬಿ ಡ್ಯಾಮ್‌ ಬಳಿ ಮರ ಕಡಿಯಲು ಆದೇಶ: ಕೇರಳ ವಿಧಾನಸಭೆಯಲ್ಲಿ ಗದ್ದಲ

ಪ್ರತಿಪಕ್ಷಗಳ ಸಭಾತ್ಯಾಗ

ಪಿಟಿಐ
Published 8 ನವೆಂಬರ್ 2021, 9:24 IST
Last Updated 8 ನವೆಂಬರ್ 2021, 9:24 IST
ಕೇರಳ ವಿಧಾನಸಭೆ (ಸಂಗ್ರಹ ಚಿತ್ರ)
ಕೇರಳ ವಿಧಾನಸಭೆ (ಸಂಗ್ರಹ ಚಿತ್ರ)   

ತಿರುವನಂತಪುರಂ: ಮುಲ್ಲಪೆರಿಯಾರ್ ಜಲಾಶಯದ ಸಮೀಪದಬೇಬಿ ಅಣೆಕಟ್ಟಿನ ಕೆಳಭಾಗದಲ್ಲಿರುವ 15 ಮರಗಳನ್ನು ಕಡಿಯಲು ತಮಿಳುನಾಡು ಸರ್ಕಾರಕ್ಕೆ ಅನುಮತಿ ನೀಡಿರುವ ಸರ್ಕಾರದ ವಿವಾದಾತ್ಮಕ ಆದೇಶ ಕೇರಳದ ವಿಧಾನಸಭಾ ಅಧಿವೇಶನದಲ್ಲಿ ಸೋಮವಾರ ತೀವ್ರ ಗದ್ದಲ ಸೃಷ್ಟಿಗೆ ಕಾರಣವಾಯಿತು.

ವಿರೋಧ ಪಕ್ಷವಾದ ಯುಡಿಎಫ್‌ ಸದಸ್ಯರು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ, ಸದನದಿಂದ ಹೊರ ನಡೆದರು.

ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಗೃಹ ಸಚಿವ ತಿರುವಂಚೂರ್ ರಾಧಾಕೃಷ್ಣನ್, ನಿಲುವಳಿ ಸೂಚನೆಯಡಿ ಈ ವಿಷಯದ ಬಗ್ಗೆ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಭಾಧ್ಯಕ್ಷ ಎಂ.ಬಿ. ರಾಜೇಶ್ ಅವರು, ’ನಿಲುವಳಿ ಸೂಚನೆ ಬದಲು, ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪದ ವಿರೋಧ ಪಕ್ಷದವರು, ನಿಲುವಳಿ ಸೂಚನೆಯಡಿ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದರು.

ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ವಿರೋಧ ಪಕ್ಷದ ಸದಸ್ಯರು, ಸರ್ಕಾರ ಇದುವರೆಗೆ ಯಾಕೆ ಆದೇಶ ರದ್ದುಗೊಳಿಸಿಲ್ಲ ಎಂಬ ಬಗ್ಗೆ ಕಾರಣ ನೀಡಬೇಕೆಂದು ಆಗ್ರಹಿಸಿದರು.

ಅರಣ್ಯ ಸಚಿವ ಎ. ಕೆ. ಶಶೀಂದ್ರನ್ ಮಾತನಾಡಿ, ’ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಅಧಿಕಾರಿಗಳು ಕೈಗೊಂಡಿರುವ ಕ್ರಮವನ್ನು ಸರ್ಕಾರ ಎಂದಿಗೂ ಒಪ್ಪುವುದಿಲ್ಲ’ ಎಂದು ಹೇಳಿದರು.

ಮುಲ್ಲಪೆರಿಯಾರ್ ಪ್ರಕರಣದಲ್ಲಿ ಕೇರಳದ ಸುರಕ್ಷತೆ ಮತ್ತು ತಮಿಳುನಾಡಿಗೆ ನೀರು ಪೂರೈಸುವುದು ಸರ್ಕಾರದ ನೀತಿಯಾಗಿದೆ.ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆಯು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ. ಇದಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ’ ಎಂದು ಅವರು ಹೇಳಿದರು.

ಸಚಿವರ ಉತ್ತರ ಆಧರಿಸಿ ಸಭಾಧ್ಯಕ್ಷರು ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು. ಇದನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.