ಕಾರಿನ ಬಾಗಿಲಿಗೆ ಹೆಬ್ಬೆರಳು ಸಿಲುಕಿದ್ದರೂ ವ್ಯಕ್ತಿಯನ್ನು ಅರ್ಧ KM ಎಳೆದೊಯ್ದರು!
ವಯನಾಡ್: ಕಾರಿನ ಬಾಗಿಲಿಗೆ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಹೆಬ್ಬೆರಳು ಸಿಲುಕಿದ್ದರೂ ಸುಮಾರು ಅರ್ಧ ಕಿಲೋ ಮೀಟರ್ ದೂರ ಎಳೆದೊಯ್ದ ಘಟನೆ ಕೇರಳದ ಮಾನಂತವಾಡಿಯ ಚೆಕ್ ಡ್ಯಾಮ್ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.15ರ ಸಂಜೆ ಘಟನೆ ನಡೆದಿದೆ.
‘ಚೆಕ್ ಡ್ಯಾಮ್ ವೀಕ್ಷಣೆಗೆ ಬಂದಿದ್ದ ಎರಡು ಪ್ರವಾಸಿ ತಂಡಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳೀಯರು ಬಿಡಿಸಲು ಮಧ್ಯೆ ಪ್ರವೇಶಿಸಿದ್ದಾರೆ. ಇದ್ದಕ್ಕಿದ್ದ ಹಾಗೆ ಪ್ರವಾಸಿಗರ ತಂಡವೊಂದು ಕಾರನ್ನು ಚಲಾಯಿಸಿಕೊಂಡು ತೆರಳಿದೆ. ಈ ಸಂದರ್ಭದಲ್ಲಿ ಕಾರಿನ ಬಾಗಿಲಿಗೆ ಮಥನ್ ಎನ್ನುವವರ ಹೆಬ್ಬೆರಳು ಸಿಲುಕಿತ್ತು. ಅದನ್ನು ಲೆಕ್ಕಿಸದೆ ಅರ್ಧ ಕಿಲೋ ಮೀಟರ್ನಷ್ಟು ದೂರ ಎಳೆದೊಯ್ದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಕಾರಿನಲ್ಲಿದ್ದ ಇತರರು ನಿಲ್ಲಿಸುವಂತೆ ಹೇಳುತ್ತಿದ್ದರು. ಇತ್ತ ಮಥನ್ ಕೂಡ ಕಾರು ನಿಲ್ಲಿಸಿ ಎಂದು ಜೋರಾಗಿ ಅಳುತ್ತಿದ್ದ. ಕೊನೆಗೂ ಕಾರನ್ನು ನಿಲ್ಲಿಸಿದ್ದರು. ಆದರೆ ಅವರನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಮಥನ್ ಅವರನ್ನು ಎಳೆದೊಯ್ದ ಪರಿಣಾಮ ಕೈ, ಕಾಲು, ಸೊಂಟದ ಭಾಗಗಳಿಗೆ ತೀವ್ರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾನಂತವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ತನಿಖೆ ನಡೆಯುತ್ತಿದೆ, ಆರೋಪಿಗಳು ಯಾರೆಂದು ಪತ್ತೆ ಮಾಡಬೇಕಿದೆ. ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಲಾಗಿದೆ. ಗಡಿ ಭಾಗದಲ್ಲಿ ಪತ್ತೆಕಾರ್ಯ ತೀವ್ರಗೊಳಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.