
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಮಮ್ಸ್ ಜಾರಿ ಮಾಡಿದ ಜಾರಿ ನಿರ್ದೇಶನಾಲಯದ ವಿರುದ್ಧ ಬುಡಕಟ್ಟು ಜನಾಂಗದ ಸದಸ್ಯರು ಬಿಲ್ಲು ಮತ್ತು ಬಾಣಗಳನ್ನು ಹಿಡಿದು ಶುಕ್ರವಾರ ರಾಂಚಿಯಲ್ಲಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ರಾಂಚಿ (ಪಿಟಿಐ): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಶನಿವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ಆದರೆ, ಇದರ ಮುನ್ನ ದಿನವಾದ ಶುಕ್ರವಾರ, ಕೇಂದ್ರದ ತನಿಖಾ ಸಂಸ್ಥೆಗಳ ವಿರುದ್ಧ ಹಲವು ಬುಡಕಟ್ಟು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಬುಡಕಟ್ಟು ಸಮುದಾಯದ ಶಸ್ತ್ರಾಸ್ತ್ರಗಳಾದ ಬಿಲ್ಲು ಮತ್ತು ಬಾಣಗಳು, ‘ಸರ್ನಾ’ ಧರ್ಮದ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಕಾರರು, ರಾಂಚಿಯ ಮೋರಾಬದಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ಬುಡಕಟ್ಟು ಸಮುದಾಯದ ಮುಖ್ಯಮಂತ್ರಿಗೆ ಕಿರುಕುಳ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು’ ಎಂಬ ಘೋಷಣಾ ಫಲಕವನ್ನು ಪ್ರದರ್ಶಿಸಿದರು. ರಾಜಭವನದ ಬಳಿ ಪ್ರತಿಭಟನೆ ನಡೆಸಿ, ಸೊರೇನ್ ವಿರುದ್ಧದ ಕ್ರಮಗಳನ್ನು ಇ.ಡಿ ಅಧಿಕಾರಿಗಳು ನಿಲ್ಲಿಸದಿದ್ದರೆ ಜಾರ್ಖಂಡನ್ನಲ್ಲಿ ಮತ್ತೊಂದು ‘ಉಲ್ಗುಲಾನ್’ (ದಂಗೆ) ನಡೆಯಲಿದೆ ಎಂದು ಎಚ್ಚರಿಸಿದರು.
19ನೇ ಶತಮಾನದಲ್ಲಿ ಸ್ಥಳೀಯ ಆಡಳಿತಾಧಿಕಾರಿಗಳು ಬುಡಕಟ್ಟು ಜನರ ಮೇಲೆ ನಡೆಸುತ್ತಿದ್ದ ದೌರ್ಜನ್ಯ ಮತ್ತು ತಾರತಮ್ಯ ವಿರೋಧಿಸಿ ಬಿರ್ಸಾ ಮುಂಡಾ ಅವರು ‘ಉಲ್ಗುಲಾನ್’ ಚಳವಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.