ADVERTISEMENT

ತ್ರಿವಳಿ ತಲಾಖ್ ನಿಷೇಧ ಲಿಂಗ ಸಮಾನತೆ, ಶಬರಿಮಲೆ ಸಂಪ್ರದಾಯದ ವಿಚಾರ: ಮೋದಿ

ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹತ್ಯೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 2:18 IST
Last Updated 2 ಜನವರಿ 2019, 2:18 IST
   

ನವದೆಹಲಿ:ತ್ರಿವಳಿ ತಲಾಖ್ ನಿಷೇಧ ವಿಚಾರ ಲಿಂಗ ಸಮಾನತೆಯದ್ದಾಗಿದ್ದರೆ ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ಇಲ್ಲದಿರುವುದು ಸಂಪ್ರದಾಯಕ್ಕೆ ಸಂಬಂಧಿಸಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, ‘ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ತ್ರಿವಳಿ ತಲಾಖ್ ನಿಷೇಧ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇದನ್ನು ಧರ್ಮದ ಆಧಾರದಲ್ಲಿ ನೋಡಬಾರದು’ ಎಂದು ಹೇಳಿದ್ದಾರೆ.

ಆದರೆ, ಶಬರಿಮಲೆ ದೇಗುಲಕ್ಕೆ ಸ್ತ್ರೀಯರ ಪ್ರವೇಶ ವಿಚಾರ ಸಂಪ್ರದಾಯಕ್ಕೆ ಸಂಬಂಧಿಸಿದ್ದಾಗಿದೆ.ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ನ್ಯಾಯಪೀಠದಲ್ಲಿದ್ದ ಮಹಿಳಾ ನ್ಯಾಯಮೂರ್ತಿ ತೀರ್ಪಿಗೆ ಅಸಮ್ಮತಿ ಸೂಚಿಸಿದ್ದನ್ನು ನಾವು ಗಮನಿಸಬೇಕು ಎಂದು ಮೋದಿ ಹೇಳಿದ್ದಾರೆ. ನ್ಯಾಯಮೂರ್ತಿ ಇಂದು ಮಲ್ಹೊತ್ರಾ ಅವರು ತೀರ್ಪಿನ ಅಂಶಗಳಿಗೆ ಸಹಮತ ವ್ಯಕ್ತಪಡಿಸಿರಲಿಲ್ಲ.

ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹತ್ಯೆಗೆ ಖಂಡನೆ: ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಗುಂಪು ಹಲ್ಲೆ ಮತ್ತು ಹತ್ಯೆಗಳು ಸಂಪೂರ್ಣ ಖಂಡನಾರ್ಹ. ಇವುನಾಗರಿಕ ಸಮಾಜಕ್ಕೆ ಹೇಳಿಮಾಡಿಸಿದ್ದಲ್ಲ ಎಂದೂ ಮೋದಿ ಹೇಳಿದ್ದಾರೆ. ಆದರೆ, ಇಂತಹ ಘಟನೆಗಳು 2014ರ ನಂತರ ಮಾತ್ರವೇ ನಡೆದಿರುವುದೇ ಎಂದೂ ಪ್ರಶ್ನಿಸಿದ್ದಾರೆ. ಗುಂಪು ಹಲ್ಲೆ ಮತ್ತು ಹತ್ಯೆ ತಡೆಗೆ ಒಗ್ಗಟ್ಟಿನಿಂದ ಹೋರಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.