ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನ ನೀಡಲು ಅನುಸರಿಸುವ ತ್ರಿವಳಿ ತಲಾಖ್ ಪದ್ಧತಿ ನಿಷೇಧಿಸಲುಕೇಂದ್ರ ಸರ್ಕಾರ ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ಅನುಮೋದನೆ ದೊರೆಯದ ಕಾರಣ ಸರ್ಕಾರ ಮತ್ತೊಮ್ಮೆ ಸುಗ್ರೀವಾಜ್ಞೆ ಮೊರೆ ಹೋಗಿದೆ.
‘ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಸುಗ್ರೀವಾಜ್ಞೆ–2019’ ಅನ್ವಯ ತ್ರಿವಳಿ ತಲಾಖ್ ಕಾನೂನುಬಾಹಿರ ಮತ್ತು ಜಾಮೀನು ರಹಿತ ಕ್ರಿಮಿನಲ್ ಅಪರಾಧವಾಗಲಿದೆ. ತಲಾಖ್ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷ ಜೈಲು ಶಿಕ್ಷೆಯಾಗಲಿದೆ.
ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆಯದ ಕಾರಣ 2018ರ ಸೆಪ್ಟೆಂಬರ್ನಲ್ಲಿ ಮೊದಲ ಬಾರಿಗೆ ಸುಗ್ರೀವಾಜ್ಞೆ ಹೊರಡಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ಮಸೂದೆಯನ್ನು ಲೋಕಸಭೆ
ಯಲ್ಲಿ ಮಂಡಿಸಿ ಅಂಗೀಕಾರ ಪಡೆದು
ಕೊಂಡಿದೆ. ಎರಡನೇ ಬಾರಿಯೂ ರಾಜ್ಯಸಭೆಯ ಒಪ್ಪಿಗೆ ದೊರೆಯದ ಕಾರಣ ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಿದೆ. ಸುಗ್ರೀವಾಜ್ಞೆ ಆರು ತಿಂಗಳು ಜಾರಿಯಲ್ಲಿರುತ್ತದೆ.
ಎಂಸಿಐ ಸುಗ್ರೀವಾಜ್ಞೆ
ಹಗರಣ ಆರೋಪಗಳ ಕಳಂಕ ಹೊತ್ತಿರುವ ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ನಿರ್ವಹಣೆಯನ್ನು ತಜ್ಞರ ಸಮಿತಿಗೆ ಒಪ್ಪಿಸಲು ಸರ್ಕಾರ ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಿದೆ.
ಎಂಸಿಐ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಯ ಮಸೂದೆಯು ಸಂಸತ್ತಿನ ಅಂಗೀಕಾರಕ್ಕೆ ಬಾಕಿ ಇದೆ. ಮಸೂದೆ ಅಂಗೀಕಾರ ಆಗುವವರೆಗೆ ತಜ್ಞರ ಸಮಿತಿಯು ಎಂಸಿಐಯನ್ನು ಮುನ್ನಡೆಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಸಭೆ ಅನುಮತಿ ನೀಡಿದೆ.
ಎಂಸಿಐ ಚುನಾಯಿತ ಮಂಡಳಿಯ ಅವಧಿ ಸದ್ಯದಲ್ಲಿಯೇ ಮುಗಿಯಲಿದೆ. ಹೊಸ ಆಯೋಗ ಅಸ್ತಿತ್ವಕ್ಕೆ ಬರುವವರೆಗೆ ಅದನ್ನು ಮುನ್ನಡೆಸಲು ತಜ್ಞರ ಸಮಿತಿ ರಚಿಸಲಾಗಿದೆ. ಆ ಸಮಿತಿಗೆ ಅಧಿಕಾರ ನೀಡಲು ಕೇಂದ್ರ ಸಂಪುಟ ಈ ಮೊದಲು ಸುಗ್ರೀವಾಜ್ಞೆ ಹೊರಡಿಸಿತ್ತು. ಮಸೂದೆಗೆ ಅನುಮೋದನೆ ಪಡೆಯಲು ಅಧಿವೇಶನದಲ್ಲಿ ಸಾಧ್ಯವಾಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.