ಅಗರ್ತಲಾ: ಬಂಗಾಳಿಯರನ್ನು ಜಾಟ್ಸ್ ಮತ್ತು ಪಂಜಾಬಿಯರ ಜೊತೆಗೆ ಹೋಲಿಕೆ ಮಾಡಿ ನೀಡಿದ್ದ ಹೇಳಿಕೆಗಾಗಿ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ಕ್ಷಮೆಯಾಚಿಸಿದ್ದಾರೆ. ಯಾರ ಮನನೋಯಿಸುವ ಉದ್ದೇಶ ತಮಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಾಟ್ಸ್ ಮತ್ತು ಪಂಜಾಬಿಗಳು ದೈಹಿಕವಾಗಿ ಸದೃಢರಾಗಿದ್ದಾರೆ. ಆದರೆ, ಬಂಗಾಳಿಗಳಷ್ಟು ಬುದ್ಧಿವಂತರಲ್ಲ ಎಂಬ ಅವರ ಹೇಳಿಕೆಯು ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಎರಡೂ ಸಮುದಾಯದ ಬಗ್ಗೆ ತಮಗೆ ಹೆಮ್ಮೆ ಇದೆ. ಈ ಹೇಳಿಕೆಗಾಗಿ ತಮ್ಮನ್ನು ಮನ್ನಿಸಬೇಕು’ ಎಂದು ಕೋರಿದ್ದಾರೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜಾಟ್ಸ್ ಮತ್ತು ಪಂಜಾಬಿಗಳು ನೀಡಿರುವ ಕೊಡುಗೆಗಾಗಿ ನಾನು ನಮಸ್ಕರಿಸುತ್ತೇನೆ. ದೇಶದ ಪ್ರಗತಿಯಲ್ಲಿ ಈ ಸಮುದಾಯಗಳ ಕೊಡುಗೆ ಅಲ್ಲಗಳೆಯುವಂತಿಲ್ಲ. ಕೆಲವರಲ್ಲಿ ಇರುವ ಅಭಿಪ್ರಾಯವನ್ನಷ್ಟೇ ನಾನು ಹೇಳಿದ್ದೆ. ಈ ಹೇಳಿಕೆಯಿಂದಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಹೊಂದಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.