ADVERTISEMENT

ವೆಂಕಟೇಶ್ವರನ ಪುಷ್ಪ ಯಜ್ಞಕ್ಕೆ ಮೂರೂವರೆ ಟನ್ ಹೂವುಗಳನ್ನು ಬಳಸಿದ ಟಿಟಿಡಿ

ಪಿಟಿಐ
Published 5 ಏಪ್ರಿಲ್ 2024, 11:26 IST
Last Updated 5 ಏಪ್ರಿಲ್ 2024, 11:26 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ತಿರುಪತಿ(ಆಂಧ್ರಪ್ರದೇಶ): ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ನಿರ್ವಹಣೆಗೆ ಒಳಪಟ್ಟಿರುವ ಶ್ರೀನಿವಾಸ ಮಂಗಾಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಪುಷ್ಪ ಯಜ್ಞಕ್ಕೆ ಒಟ್ಟು 3 ಟನ್‌ನಷ್ಟು ಬಗೆಬಗೆಯ ಹೂವುಗಳನ್ನು ಬಳಸಲಾಗಿದೆ.

ಗುರುವಾರ ಮಧ್ಯಾಹ್ನ 2ರಿಂದ 5 ಗಂಟೆಯೊಳಗೆ ಈ ಯಜ್ಞ ನಡೆದಿದೆ.

ADVERTISEMENT

'ಶ್ರೀನಿವಾಸ ಮಂಗಾಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪುಷ್ಪ ಯಜ್ಞ ಗುರುವಾರ ಸಂಜೆ ನೆರವೇರಿತು. ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನೆರವೇರಿದ ದೇವರ ಮೂರ್ತಿಗಳ ಹೂ ಮಜ್ಜನಕ್ಕೆ ಮೂರೂವರೆ ಟನ್‌ನಷ್ಟು ತರಹೇವಾರಿ ಹೂವುಗಳನ್ನು ಬಳಸಲಾಯಿತು’ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಗುಲಾಬಿ, ಮಲ್ಲಿಗೆ, ಲಿಲ್ಲಿ ಮುಂತಾದ ಹೂಗಳನ್ನು ಅಧಿಕಾರಿಗಳು ದೇವರ ಸೇವೆಗೆ ತಂದಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಇದಕ್ಕೂ ಮುನ್ನ, ತಿರುಪ್ಪವಾದ ಮತ್ತು ಕಲ್ಯಾಣೋತ್ಸವಗಳನ್ನು ಒಳಗೊಂಡ ಸ್ನಾಪನಾ ಕಲ್ಯಾಣೋತ್ಸವ ನೆರವೇರಿತು.

ಡಯಲ್ ಯುವರ್ ಇಒ:

ಭಕ್ತರ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸ್ವೀಕರಿಸಲು ಆರಂಭಿಸಿರುವ ತಿಂಗಳ ‘ಡಯಲ್ ಯುವರ್ ಇಒ’ ಕಾರ್ಯಕ್ರಮದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಎ.ವಿ. ಧರ್ಮ ರೆಡ್ಡಿ ಭಾಗವಹಿಸಿ, ಭಕ್ತರ ಸಲಹೆ ಸ್ವೀಕರಿಸಿದರು.

ಶುಕ್ರವಾರ ದೇಶದ ವಿವಿಧೆಡೆಯಿಂದ 29 ಮಂದಿ ಭಕ್ತರು ಕರೆ ಮಾಡಿದ್ದರು. ಗುಜರಾತ್‌ನ ವೆಂಕಟೇಶ್ ಎಂಬವರು ಕರೆ ಮಾಡಿ, ಉತ್ತರ ಭಾರತದಲ್ಲಿರುವ 120 ವರ್ಷಗಳಷ್ಟು ಹಳೆಯದಾದ ಶ್ರೀ ವೆಂಕಟೇಶ್ವರ ದೇವಸ್ಥಾನ ಜೀರ್ಣೋದ್ಧಾರ ವಿಧಾನದ ಬಗ್ಗೆ ರೆಡ್ಡಿ ಅವರನ್ನು ವಿಚಾರಿಸಿದರು.

‘ಟಿಟಿಡಿಯ ಅಧಿಕಾರಿಗಳ ತಂಡವು ದೇವಾಲಯಕ್ಕೆ ಭೇಟಿ ನೀಡಿ, ಸಾಧ್ಯತೆಗಳನ್ನು ಪರಿಶೀಲಿಸಿದ ನಂತರ, ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣ ಟ್ರಸ್ಟ್ (ಶ್ರೀವಾಣಿ) ಕೋರಿಕೆಯಂತೆ ಟಿಟಿಡಿ ನಿಧಿಯಿಂದ ದೇವಾಲಯ ನಿರ್ಮಾಣ ಅಥವಾ ನವೀಕರಣ ನಡೆಸಲಿದೆ’ ಎಂದು ರೆಡ್ಡಿ ತಿಳಿಸಿದರು.

ದೇವಾಲಯದ ಸಂಸ್ಥೆಯು ಕಳೆದ ಮೂರು ವರ್ಷಗಳಲ್ಲಿ 3,600 ದೇವಾಲಯಗಳ ನಿರ್ಮಾಣ ಪ್ರಾರಂಭಿಸಿದ್ದು, ಇದರಲ್ಲಿ 1700 ದೇವಾಲಯಗಳನ್ನು ಪೂರ್ಣಗೊಳಿಸಿದೆ ಎಂದು ರೆಡ್ಡಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.