ಲಖನೌ: ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಔಷಧೀಯ ಗುಣಗಳಿರುವ ಅರಿಶಿನವನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ‘ಒಂದು ಜಿಲ್ಲೆ ಒಂದು ಉತ್ಪನ್ನ’(ಒಡಿಒಪಿ) ವಾಗಿ ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ದೇಶದ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರ್ಥಿಕ, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ಪ್ರಾಯೋಜಿತ ‘ಒಂದು ಜಿಲ್ಲೆ ಒಂದು ಉತ್ಪನ್ನ’ಯೋಜನೆ ಅಡಿಯಲ್ಲಿ ಅರಿಶಿನವನ್ನು ಆಯ್ಕೆ ಮಾಡಲಾಗಿದೆ.
ಏಷ್ಯಾ, ಆಫ್ರಿಕಾ ಮತ್ತು ಕೆರಿಬಿಯನ್ನಲ್ಲಿ ಅಡುಗೆಗೆ ಬಳಸುತ್ತಿರುವ ಅತ್ಯಂತ ಸುದೀರ್ಘ ಇತಿಹಾಸವನ್ನು ಅರಿಶಿನ ಹೊಂದಿದೆ.
ಅರಿಶಿನ ಹೆಚ್ಚು ಬೆಳೆಯುವ ದಕ್ಷಿಣದ ಈರೋಡ್, ಸಾಂಗ್ಲಿ ಮತ್ತು ನಿಜಾಮಾಬಾದ್ ರೀತಿ ಕುಶಿನಗರವೂ ಅರಿಶಿನ ಉದ್ಯಮದ ತವರಾಗುವ ಸಾಮರ್ಥ್ಯ ಹೊಂದಿದೆ.
ಕುಶಿನಗರ ಜಿಲ್ಲೆಯ ದುದಹಿ, ರಾಮಕೋಲ, ಬುಶುನ್ಪುರ್, ಖಡ್ಡಾ, ಸೆವೆರಹಿ, ಕಪ್ತಾನ್ಗಂಜ್, ಕತ್ಕೂಯನ್ ಮತ್ತು ಫಾಸಿಲ್ನಗರಗಳಲ್ಲಿ ಹೆಚ್ಚು ಅರಿಶಿನ ಬೆಳೆಯಲಾಗುತ್ತದೆ.
ಸರ್ಕಾರದ ವಕ್ತಾರರ ಪ್ರಕಾರ, ಜಿಲ್ಲೆಯಲ್ಲಿ ಸುಮಾರು 800 ಹೆಕ್ಟೇರ್ಗಳಲ್ಲಿ ಅರಿಶಿನ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್ನ ಇಳುವರಿ 36.77 ಕ್ವಿಂಟಾಲ್ ಆಗಿದೆ. ರಾಮಕೋಲ ಬ್ಲಾಕ್ ಒಂದರಲ್ಲೇ 200 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತದೆ.
ಸದ್ಯ, ಜಿಲ್ಲೆಯಲ್ಲಿ 10,000ದಷ್ಟು ರೈತರು ಅರಿಶಿನ ಬೆಳೆ ಬೆಳೆಯುತ್ತಿದ್ದಾರೆ.
ಚತುಷ್ಫಥ ರಸ್ತೆ ಮೂಲಕ ಕುಶಿನಗರವು ಬಿಹಾರದಿಂದ ಬಂಗಾಳಕ್ಕೆ ಮತ್ತು ಈಶಾನ್ಯ ರಾಜ್ಯಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪೂರ್ಣಗೊಂಡ ಬಳಿಕ ವಿವಿಧ ದೇಶಗಳಿಗೂ ಸಂಪರ್ಕ ಸಾಧಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.