ನವದೆಹಲಿ: ‘ಕೋವಿಡ್ ಟೂಲ್ಕಿಟ್‘ ಪ್ರಕರಣದ ತನಿಖೆಯ ಭಾಗವಾಗಿ ಕಳೆದ ತಿಂಗಳು ಟ್ವಿಟರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನಿಷ್ ಮಹೇಶ್ವರಿ ಅವರನ್ನು ದೆಹಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ವಿವರವನ್ನು ಬಹಿರಂಗಪಡಿಸಿಲ್ಲ. ಆದರೆ, ಬಳಕೆದಾರರು ಟ್ವಿಟ್ಗಳನ್ನು ‘ಮ್ಯಾನಿಪ್ಯುಲೇಟೆಡ್ ಮೀಡಿಯಾ'ಅಂದರೆ ತಿರುಚುವುದಕ್ಕೆ ಸಂಬಂಧಿಸಿ, ಕಂಪನಿಯ ನೀತಿಯ ಬಗ್ಗೆಯೂ ಅವರನ್ನು ಪ್ರಶ್ನಿಸಲಾಗಿದೆ ಎಂದು ಹೇಳಿದರು.
‘ಕೋವಿಡ್–19 ಸಾಂಕ್ರಾಮಿಕ ರೋಗ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಕಳಂಕ ತರಲು ಕಾಂಗ್ರೆಸ್ ಈ ಟೂಲ್ಕಿಟ್ ತಯಾರಿಸಿದೆ'ಎಂದು ಬಿಜೆಪಿಯ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದರು. ಪಾತ್ರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ವೀಟರ್, ‘ಪಾತ್ರ ಅವರು ತಿರುಚಿರುವ ಹಾಗೂ ಖಚಿತ ದಾಖಲೆಗಳಿಲ್ಲದ ಟೂಲ್ ಕಿಟ್ ಹಂಚಿಕೊಂಡಿದ್ದಾರೆ'ಎಂದು ಹೇಳಿತ್ತು. ಈ ಬೆಳವಣಿಗೆಗಳ ನಂತರ, ಪೊಲೀಸರು ಟ್ವಿಟರ್ ಎಂಡಿ ಅವರನ್ನು ಪ್ರಶ್ನಿಸಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ತಂಡವನ್ನು ಮೇ 31 ರಂದು ಬೆಂಗಳೂರಿಗೆ ಕಳುಹಿಸಲಾಗಿದ್ದು, ಅಲ್ಲಿ ಮಹೇಶ್ವರಿಯನ್ನು ಪ್ರಶ್ನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇವುಗಳನ್ನೂಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.