ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ಚುನಾವಣಾ ತಂತ್ರಗಾರ, ಜೆಡಿಯುನ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರು, ಪೌರತ್ವ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ ಪ್ರಕ್ರಿಯೆ (ಎನ್ಆರ್ಸಿ) ತಡೆಯಲು ಇರುವ ಮಾರ್ಗಗಳ ಪ್ರಸ್ತಾಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿಯನ್ನು ತಡೆಯಲು ಇರುವ ಸಮರ್ಥ ಮಾರ್ಗ ಎರಡೇ. 1) ನಿಮಗೆ ಸಿಗುವ ಎಲ್ಲ ವೇದಿಕೆಗಳಲ್ಲೂ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾ, ಕಾಯ್ದೆ ವಿರುದ್ಧ ಧ್ವನಿ ಎತ್ತುವುದು. 2) ಬಿಜೆಪಿಯೇತರ ಸರ್ಕಾರಗಳಿರುವ 16 ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು ಅಲ್ಲದಿದ್ದರೂ, ಬಹುತೇಕರು ಈ ಕಾಯ್ದೆ ಜಾರಿಯನ್ನು ನಿರಾಕರಿಸಬೇಕು. ಎಲ್ಲರೂ ಒಟ್ಟಾಗಿದ್ದಾರೆ ಎಂಬುದು ಇಲ್ಲಿ ಮುಖ್ಯ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಸದ್ಯ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆ ಮೈತ್ರಿಯಲ್ಲಿ ಇರುಸುಮುರುಸು ಉಂಟು ಮಾಡಿದೆ.
ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಹಾರದ ಮುಖ್ಯಮಂತ್ರಿ, ಜೆಡಿಯು ವರಿಷ್ಠ ನಿತೀಶ್ ಕುಮಾರ್, ಎನ್ಆರ್ಸಿ ಎಂದರೆ ಏನು? ಅದನ್ನು ಬಿಹಾರದಲ್ಲಿ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದರು. ಸದ್ಯ ಪ್ರಶಾಂತ್ ಅವರ ಹೇಳಿಕೆಯೂ ಇದಕ್ಕೆ ಪೂರಕವಾಗಿದೆ.
ಇಂಡಿಯನ್ ಪೊಲಿಟಕಲ್ ಆಕ್ಷನ್ ಕಮಿಟಿ (ಐ–ಪ್ಯಾಕ್)ಯ ಮುಖ್ಯಸ್ಥರಾಗಿರುವ ಪ್ರಶಾಂತ್ ಕಿಶೋರ್, 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಪಾತ್ರ ದೊಡ್ಡದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.