ಮಾಲಕಾನ್ಗಿರಿ, ಒಡಿಶಾ: ‘ಇಲ್ಲಿನ ಮಾಲಕಾನ್ಗಿರಿ ಜಿಲ್ಲೆಯ ಮೈಥಿಲಿ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಟುಲಿಗುಡಾ, ಸದೆಹೈಗುಡಾ ಅರಣ್ಯದಲ್ಲಿ ಇಬ್ಬರು ನಕ್ಸಲರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಛತ್ತೀಸಗಢದ ಸಿಪಿಐ(ಮಾವೋವಾದಿ) ಸಮಿತಿ ಸದಸ್ಯರಾದ ಕೆಶಕಾವಾಸಿ ಹಾಗೂ ರಾಜೇಶ್ ಅಲಿಯಾಸ್ ಶನುಕುಂಜಾಮ್ ಬಂಧಿತರಾಗಿದ್ದು, ಇಬ್ಬರು ತಲೆಗೂ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಗುರುವಾರ ರಾತ್ರಿಯಿಂದಲೇ ಕಾಡಿನಲ್ಲಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದರು. ಮಾವೋವಾದಿಗಳು ಮುಖಾಮುಖಿಯಾಗುತ್ತಿದ್ದಂತೆಯೇ ಶರಣಾಗುವಂತೆ ಸೂಚಿಸಲಾಯಿತು. ಈ ವೇಳೆ ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದರು. ಪೊಲೀಸರು ಪ್ರತಿದಾಳಿ ನಡೆಸಿ, ಇಬ್ಬರು ನಕ್ಸಲರನ್ನು ಬಂಧಿಸಿದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ತಂಡದಲ್ಲಿದ್ದ ಉಳಿದವರು ಪರಾರಿಯಾಗಿದ್ದಾರೆ. ಬಂಧಿತರಿಂದ ರಿವಾಲ್ವರ್, ಆರು ಜೀವಂತ ಗುಂಡುಗಳು, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಪಾಟೀಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.