ADVERTISEMENT

ಮಹಾರಾಷ್ಟ್ರದಲ್ಲಿ ಉದ್ಧವ್‌ ಈಗ ಕೋವಿಡ್‌ ಕುಟುಂಬ ವೈದ್ಯ: ಸಾಮ್ನಾ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 19:30 IST
Last Updated 11 ಮೇ 2021, 19:30 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ    

ಮುಂಬೈ: ‘ಕಾಳಜಿಯ ಮನೋಭಾವ ಹೊಂದಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು, ಮಹಾರಾಷ್ಟ್ರದಲ್ಲಿಕೋವಿಡ್‌ ಪಿಡುಗು ಅಪಾಯದ ಮಟ್ಟವನ್ನು ಮೀರದಂತೆ ನೋಡಿಕೊಂಡಿದ್ದಾರೆ. ಅವರೀಗ ಇಡೀ ಮಹಾರಾಷ್ಟ್ರದ ಕುಟುಂಬ ವೈದ್ಯರಾಗಿದ್ದಾರೆ ಮತ್ತು ‘ಕೋವಿಡ್‌ ತಜ್ಞ’ (ಕೋವಿಡಾಲಜಿಸ್ಟ್‌) ಎನಿಸಿದ್ದಾರೆ’ ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ ಬಣ್ಣಿಸಿದೆ.

‘ಠಾಕ್ರೆ ಅವರು ಪಿಡುಗಿನ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ್ದಾರೆ. ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಅವರು ಒಂದರ್ಥದಲ್ಲಿ ಮಹಾರಾಷ್ಟ್ರದ 12 ಕೋಟಿ ಜನರ ಕುಟುಂಬ ವೈದ್ಯರಾಗಿದ್ದಾರೆ. ಕೋವಿಡ್‌ ವಿರುದ್ಧ ಹೋರಾಡುವಂತೆ ಠಾಕ್ರೆ ಅವರು ಜನರಲ್ಲಿ ಧೈರ್ಯವನ್ನು ತುಂಬುತ್ತಿದ್ದಾರೆ. ಆದ್ದರಿಂದ ಅವರನ್ನು ಬೆಂಬಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಸೋಂಕು ತಗಲಬಹುದೆಂಬ ಭಯದಿಂದ ಉದ್ಧವ್‌ ಅವರು ಒಂದು ವರ್ಷದಿಂದ ಮನೆಯಿಂದ ಹೊರಗೆ ಬರುತ್ತಿಲ್ಲ’ ಎಂದು ಬಿಜೆಪಿ ಹಾಗೂ ಇತರ ವಿರೋಧಪಕ್ಷಗಳು ಮಾಡಿರುವ ಟೀಕೆಗೆ ಪ್ರತ್ಯುತ್ತರ ನೀಡಿರುವ ಪತ್ರಿಕೆಯು, ‘ಅನಗತ್ಯವಾಗಿ ತಿರುಗಾಡುವುದನ್ನು ಅವರು ನಿಲ್ಲಿಸಿದ್ದಾರೆ. ಪಿಡುಗಿನ ಸಂದರ್ಭದಲ್ಲಿ ಕ್ಷುಲ್ಲಕ ರಾಜಕೀಯವನ್ನು ಬಿಟ್ಟು ಕೋವಿಡ್‌ ನಿರ್ವಹಣೆಯತ್ತಲೇ ಅವರು ಗಮನ ಕೇಂದ್ರೀಕರಿಸಿ
ದ್ದಾರೆ. ಆದ್ದರಿಂದಲೇ ಮಹಾರಾಷ್ಟ್ರ ಮಾದರಿಯನ್ನು ಹೊಗಳದಿರಲು ಪ್ರಧಾನಿ ಮೋದಿಗೂ ಸಾಧ್ಯವಾಗಲಿಲ್ಲ’ ಎಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.