ಮುಂಬೈ: ‘ನನ್ನ ತಂದೆ, ಶಿವಸೇನಾದ ಸಂಸ್ಥಾಪಕ ಬಾಳಾ ಠಾಕ್ರೆ ಅವರನ್ನು ಬಿಜೆಪಿಯು ಮೋಸಗೊಳಿಸಿದ್ದನ್ನು ನೋಡಿದ್ದೇನೆ. ಹಾಗಾಗಿ, ಬಿಜೆಪಿಯು ಹಿಂದುತ್ವದ ಸೋಗಿನಲ್ಲಿ ಆಡುವ ಆಟಗಳನ್ನು ನಾನು ನಿರ್ಲಕ್ಷಿಸುವುದಿಲ್ಲ, ಚಾಣಾಕ್ಷತನದಿಂದ ವರ್ತಿಸುತ್ತೇನೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಎಚ್ಚರಿಕೆ ನೀಡಿದ್ದಾರೆ.
ಮರಾಠಿ ದಿನಪತ್ರಿಕೆ ‘ಲೋಕಸತ್ತಾ’ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಉದ್ಧವ್, ‘ಶಿವಸೇನಾ ಮತ್ತು ಬಿಜೆಪಿಯು ಪರಸ್ಪರ ಪಾಲುದಾರ ಪಕ್ಷಗಳಾಗಿದ್ದವು. ಆದರೂ ನಮ್ಮ ತಂದೆ ಬಾಳಾ ಠಾಕ್ರೆ ಅವರು ಇನ್ನೂ ಬದುಕಿದ್ದಾಗಲೇ ಅವರಿಗೆ ಬಿಜೆಪಿ ಮೋಸ ಮಾಡಿತು. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ’ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ಮತ್ತು ಸಂಬಂಧಿ ರಾಜ್ ಠಾಕ್ರೆ ಅವರ ಹೆಸರನ್ನು ಉಲ್ಲೇಖಿಸದೇ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಉದ್ಧವ್, ‘ಹಿಂದುತ್ವದ ಹೊಸ ಆಟಗಾರರ ಬಗ್ಗೆ ಗಮನಹರಿಸುವುದಿಲ್ಲ’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.