ADVERTISEMENT

ಅಮಿತ್‌ ಶಾಗೆ ಶರಣಾದ ಎಐಎಡಿಎಂಕೆ: ಉದಯನಿಧಿ ವ್ಯಂಗ್ಯ

ಪಿಟಿಐ
Published 22 ಡಿಸೆಂಬರ್ 2025, 14:33 IST
Last Updated 22 ಡಿಸೆಂಬರ್ 2025, 14:33 IST
ಉದಯನಿಧಿ ಸ್ಟಾಲಿನ್‌
ಉದಯನಿಧಿ ಸ್ಟಾಲಿನ್‌   

ಚೆನ್ನೈ: ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯೆಂಬ (ಎಸ್‌ಐಆರ್) ಅಡ್ಡದಾರಿಯ ಮೂಲಕ ಬಿಜೆಪಿಯು ಡಿಎಂಕೆ ಪಕ್ಷದ ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರು ಆರೋಪಿಸಿದ್ದಾರೆ.

‘ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸಂಪೂರ್ಣ ಶರಣಾಗಿದ್ದಾರೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವು ‘ಅಮಿತ್‌ ಶಾ ದ್ರಾವಿಡ ಮುನ್ನೇತ್ರ ಕಳಗಂ’ ಆಗಿ ಮಾರ್ಪಟ್ಟಿದೆ’ ಎಂದು ಡಿಎಂಕೆ ಪಕ್ಷದ ಯುವ ಘಟಕದ ಮುಖ್ಯಸ್ಥರೂ ಆಗಿರುವ ಉದಯನಿಧಿ ಅಣಕಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯ ಮೂಲಕ ತಮಿಳುನಾಡಿನ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದೆ. ಬೇರೆ ರಾಜ್ಯಗಳು ಇದಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿವೆ. ಒಂದು ವೇಳೆ ಈ ನೀತಿಯಿಂದಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ  ₹10 ಸಾವಿರ ಕೋಟಿ ಹಣ ಬರಲಿದೆ ಎಂದರೂ ಅದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ನಮ್ಮ ಮುಖ್ಯಮಂತ್ರಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.