ADVERTISEMENT

ಕಾರ್ಮಿಕನ ಬಿಡುಗಡೆಗೆ ಫೆ.15ರ ಗಡುವು ನೀಡಿದ ಉಲ್ಫಾ(ಐ)

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 11:42 IST
Last Updated 27 ಜನವರಿ 2021, 11:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಬಿಹಾರ ಮೂಲದ ಕಾರ್ಮಿಕ ರಾಮ್‌ ಕುಮಾರ್‌ ಬಿಡುಗಡೆಗೆ ನಿಷೇಧಿತ ಉಗ್ರ ಸಂಘಟನೆಯಾದ ಉಲ್ಫಾ(ಸ್ವತಂತ್ರ) ಫೆ.16ರ ಗಡುವನ್ನು ಬುಧವಾರ ನೀಡಿದೆ.

ಕ್ವಿಪ್ಪ್ ತೈಲ ಮತ್ತು ಅನಿಲ ಮೂಲಸೌಕರ್ಯ ಲಿ.ನ ಸಿಬ್ಬಂದಿಯಾಗಿದ್ದ ರಾಮ್‌ ಕುಮಾರ್‌ ಹಾಗೂ ಪ್ರಣಬ್‌ ಕುಮಾರ್‌ ಗೊಗೊಯಿ ಎಂಬ ಇಬ್ಬರನ್ನು ಡಿ.22ರಂದು ಅರುಣಾಚಲ ಪ್ರದೇಶದಲ್ಲಿ ಇರುವ ಕೆಲಸದ ಸ್ಥಳದಿಂದಲೇ ಈ ಉಗ್ರ ಸಂಘಟನೆಯು ಅಪಹರಿಸಿತ್ತು.ಗೊಗೊಯಿ ಅವರು ಕಂಪನಿಯಲ್ಲಿ ಡ್ರಿಲ್ಲಿಂಗ್‌ ವಿಭಾಗದ ಸೂಪರ್‌ಇಂಟೆಂಡೆಂಟ್‌ ಆಗಿದ್ದು, ಕುಮಾರ್‌ ರೇಡಿಯೊ ಆಪರೇಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

‘ಫೆ.16ರೊಳಗೆ ಕಂಪನಿಯು ವಿಷಯಗಳ ಕುರಿತು ಪರಿಹಾರ ಕಂಡುಹಿಡಿಯದೇ ಹೋದಲ್ಲಿ ಫೆ.17ರಂದು ಕುಮಾರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಂಘಟನೆ ನೀಡಿದೆ. ಗಡುವನ್ನು ವಿಸ್ತರಿಸಲು ಸಾಧ್ಯವೇ ಇಲ್ಲ. ಅಪಹರಣಗೊಂಡ ವ್ಯಕ್ತಿಗಳ ಬಿಡುಗಡೆಗೆ ಕಂಪನಿಯು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ನಮ್ಮ ವಿರುದ್ಧವೇ ಕಾರ್ಯಾಚರಣೆಗೆ ಭದ್ರತಾ ಪಡೆಗಳು ಸಜ್ಜಾಗಿವೆ’ ಎಂದು ಸಂಘಟನೆಯ ಸದಸ್ಯ ರುಮೇಲ್‌ ಅಸೋಮ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಂಪನಿಯು ಅವರ ಬಿಡುಗಡೆಗೆ ಕ್ರಮ ಕೈಗೊಳ್ಳದೇ ಹೋದಲ್ಲಿ ಕುಮಾರ್‌ ಅವರನ್ನು ಕೊಲ್ಲುವ ಎಚ್ಚರಿಕೆಯನ್ನೂ ಸಂಘಟನೆಯು ನೀಡಿದೆ.

ADVERTISEMENT

‘ಅಪಹರಣಗೊಂಡವರ ಬಿಡುಗಡೆಗೆ ಉಗ್ರ ಸಂಘಟನೆಯು ಕಂಪನಿಯ ₹20 ಕೋಟಿ ಬೇಡಿಕೆ ಇರಿಸಿತ್ತು’ ಎಂದು ಪೊಲೀಸ್‌ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಜ.20ರಂದು ವಿಡಿಯೊವೊಂದನ್ನು ಉಲ್ಫಾ ಬಿಡುಗಡೆಗೊಳಿಸಿತ್ತು. ಇದರಲ್ಲಿ, ತಮ್ಮ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಕುಮಾರ್‌ ಹಾಗೂ ಗೊಗೊಯಿ ಬಿಹಾರ ಹಾಗೂ ಅಸ್ಸಾಂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.