ADVERTISEMENT

ಸಿಗದ ಶಾಶ್ವತ ಪುನರ್ವಸತಿ: ಜೋಶಿಮಠ ಸಂತ್ರಸ್ತರು ಅತಂತ್ರ

ಪಿಟಿಐ
Published 5 ಫೆಬ್ರುವರಿ 2023, 13:36 IST
Last Updated 5 ಫೆಬ್ರುವರಿ 2023, 13:36 IST
ಪರಿಹಾರ ಕೇಂದ್ರಗಳಿಂದ ಪೋಷಕರ ಜೊತೆ ಜೋಶಿಮಠದಲ್ಲಿರುವ ಶಾಲೆಗೆ ಬಂದ ವಿದ್ಯಾರ್ಥಿಗಳು –ಪಿಟಿಐ ಚಿತ್ರ
ಪರಿಹಾರ ಕೇಂದ್ರಗಳಿಂದ ಪೋಷಕರ ಜೊತೆ ಜೋಶಿಮಠದಲ್ಲಿರುವ ಶಾಲೆಗೆ ಬಂದ ವಿದ್ಯಾರ್ಥಿಗಳು –ಪಿಟಿಐ ಚಿತ್ರ   

ಜೋಶಿಮಠ: ಭೂಕುಸಿತದಿಂದ ನಲುಗಿರುವ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣದಿಂದ ಸಂತ್ರಸ್ತರನ್ನು ಸ್ಥಳಾಂತರಿಸಿದ್ದರೂ, ಅವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವಲ್ಲಿ ಅನಿಶ್ಚಿತತೆ ಮುಂದುವರಿದಿದೆ.

ಜೋಶಿಮಠದಿಂದ ಸ್ಥಳಾಂತರಗೊಂಡಿರುವ ಹಲವು ಕುಟುಂಬಗಳು ಸಿಂಗ್‌ಧಾರ್ ವಾರ್ಡ್‌ನ ಶಾಲೆಯೊಂದರಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದವು, ಇದೀಗ ಶಾಲೆ ಆರಂಭಗೊಂಡಿರುವ ಕಾರಣ ಅವರನ್ನು ಸೇನೆಯ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಚಾರ್‌ಧಾಮ್‌ ಯಾತ್ರಿಕರು ಬಂದರೆ ಈಗಿರುವ ಸೇನೆಯ ಬ್ಯಾರೆಕ್‌ಗಳಿಂದಲೂ ತಾವು ಹೊರ ನಡೆಯಬೇಕಾದೀತು ಎಂಬ ಭಯ ಅವರನ್ನು ಕಾಡುತ್ತಿದೆ.

ADVERTISEMENT

‘ಜನವರಿ 2ರಂದು ಜೋಶಿಮಠದಲ್ಲಿರುವ ನಮ್ಮ ಮನೆಯ ಪರಿಸರದಲ್ಲಿ ಭೂಕುಸಿತ ಆರಂಭವಾಯಿತು. ಮರುದಿನವೇ ನಮ್ಮ ಮನೆ ವಾಸಯೋಗ್ಯವಲ್ಲದಾಯಿತು’ ಎಂದು ಸೇನೆಯ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿರುವ ಭಾರತೀ ದೇವಿ ದುಗುಡ ತೋಡಿಕೊಂಡಿದ್ದಾರೆ.

‘ನಾವು ಮತ್ತು ನೆರೆಹೊರೆಯವರು ಮನೆಯಿಂದ ಕೈಗೆ ಸಿಕ್ಕಿದ ವಸ್ತುಗಳನ್ನು ತೆಗೆದುಕೊಂಡು ಶಾಲೆಯೊಂದರಲ್ಲಿ ಆಶ್ರಯ ಪಡೆದಿದ್ದೆವು. ಈಗ ಶಾಲೆ ಆರಂಭವಾಗಿದೆ ಮತ್ತು ನಮ್ಮನ್ನು ಅಲ್ಲಿಂದ ಹೊರಹಾಕಲಾಗಿದೆ’ ಎಂದೂ ದೂರಿದ್ದಾರೆ.

‘ನಮಗೆ ಮಾತ್ರ ವಾಸಿಸಲು ಮನೆ ಸಿಕ್ಕಿದರೆ ಸಾಲದು ನಮ್ಮ ಜಾನುವಾರುಗಳಿಗೂ ಸುರಕ್ಷಿತ ನೆಲೆ ಬೇಕು’ ಎಂದು ವಿಶ್ವೇಶ್ವರಿ ದೇವಿ ಎಂಬುವವರು ಆಗ್ರಹಿಸಿದ್ದಾರೆ.

26 ಕುಟುಂಬಗಳನ್ನು ಸಂಸ್ಕೃತ ಮಹಾವಿದ್ಯಾಲಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮಹಾವಿದ್ಯಾಲಯ ಆರಂಭವಾಗಲಿದ್ದು, ಮುಂದೇನು ಎಂಬ ಪ್ರಶ್ನೆ ಇವರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.