ನವದೆಹಲಿ: ಯಮುನಾ ನದಿ ಸ್ವಚ್ಛತೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ), ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ತಲಾ ₹10 ಕೋಟಿ ಮೊತ್ತದ ಕಾರ್ಯಸಾಧನಾ ಖಾತರಿ ಪ್ರಮಾಣ ಪತ್ರವನ್ನು ಒಂದುವಾರದ ಒಳಗೆ ಸಲ್ಲಿಸುವಂತೆ ಮಂಗಳವಾರ ನಿರ್ದೇಶನ ನೀಡಿದೆ.
ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ಅವರು ಮೂರು ಸರ್ಕಾರಗಳಿಗೆ ಈ ನಿರ್ದೇಶನವನ್ನು ನೀಡಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜತೆ ಕಾರ್ಯಸಾಧನಾ ಖಾತರಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ತಿಳಿಸಿದೆ. ಮುಂದೆ ಈ ರೀತಿ ಕಾರ್ಯಲೋಪವಾಗುವುದಿಲ್ಲ ಎಂಬುದು ದೃಢಪಡಿಸಲು ಈ ನಿರ್ದೇಶನ ನೀಡಿದೆ.
ಕಾರ್ಯ ಅನುರಸರಣೆಯಲ್ಲಿ ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ವೈಯಕ್ತಿಕವಾಗಿ ಹೊಣೆಯಾಗುತ್ತಾರೆ ಎಂದೂ ಎನ್ಜಿಟಿ ಹೇಳಿದೆ.
ಎನ್ಜಿಟಿ ರಚಿಸಿರುವ ಮೇಲ್ವಿಚಾರಣ ಸಮಿತಿ ಶಿಫಾರಸು ಮಾಡಿರುವಂತೆ ಯಮುನಾ ನದಿ ಸ್ವಚ್ಛತೆ ನಡೆಯದೇ ಇದ್ದರೆ ಮೂರು ರಾಜ್ಯಗಳು ನೀಡಿರುವ ಮೊತ್ತವನ್ನು ಕಳೆದುಕೊಳ್ಳುತ್ತಾರೆಎಂದು ತಿಳಿಸಿರುವ ಮಂಡಳಿ ತಕ್ಷಣವೇ ಸಮಿತಿಯ ಅಂತಿಮ ವರದಿಯನ್ನು ಸಲ್ಲಿಸುವಂತೆ ಹೇಳಿದೆ.
ನಗರದ ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ಸ್ವಚ್ಛತೆ ಮತ್ತು ಕಸ ಸ್ವಚ್ಛಗೊಳಿಸಲು ಮೂರು ರಾಜ್ಯಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದುನಿರ್ದೇಶನ ನೀಡಿದೆ.
ಬಿ.ಎಸ್.ಸಜ್ವಾನ್ ಮತ್ತು ದೆಹಲಿ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಶೈಲಜಾ ಚಂದ್ರ ಅವರನ್ನು ಒಳಗೊಂಡ ಮೇಲ್ವಿಚಾರಣ ಸಮಿತಿ ಸಲ್ಲಿಸಿದ ಮಧ್ಯಂತರ ವರದಿ ಪರಿಶೀಲಿಸಿ ಹಸಿರು ನ್ಯಾಯಮಂಡಳಿ ಮೂರು ರಾಜ್ಯಗಳಿಗೆ ಈ ಆದೇಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.