ADVERTISEMENT

ಕೃಷಿ ಸುಧಾರಣಾ ಕಾಯ್ದೆಗಳಿಗೆ ಇನ್ನಷ್ಟು ರೈತರ ಬೆಂಬಲ: ನರೇಂದ್ರ ಸಿಂಗ್‌ ತೋಮರ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 15:01 IST
Last Updated 14 ಡಿಸೆಂಬರ್ 2020, 15:01 IST
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್   

ನವದೆಹಲಿ: ಕನಿಷ್ಠ ಹತ್ತು ವಿವಿಧ ರೈತ ಸಂಘಟನೆಗಳಿಗೆ ಸೇರಿದ ಹಲವು ರಾಜ್ಯಗಳ ರೈತರು ಇಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಭೇಟಿ ಮಾಡಿ ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಉತ್ತರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ ಮತ್ತು ಹರಿಯಾಣದ ಸಂಘಟನೆಗಳ ರೈತರು ಬೆಂಬಲ ಸೂಚಿಸಿದ್ದಾರೆ ಎಂದು ವರದಿಯಾಗಿವೆ.

ಈ ಬಗ್ಗೆ ಮಾಹಿತಿ ನೀಡಿರುವ ತೋಮರ್‌, ‘ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರದ ಅಖಿಲ ಭಾರತ ರೈತರ ಸಹಕಾರ ಸಮಿತಿಯ ರೈತರು ಇಂದು ಭೇಟಿಯಾದರು. ಅವರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಪತ್ರ ಸಲ್ಲಿಸಿದ್ದಾರೆ. ಮೋದಿ ಸರ್ಕಾರವು ಈ ಕಾಯ್ದೆಗಳನ್ನು ರೈತರ ಕಲ್ಯಾಣಕ್ಕಾಗಿ ರೂಪಿಸಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ ಮತ್ತು ಅವುಗಳನ್ನು ಬೆಂಬಲಿಸಿ ಸ್ವಾಗತಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಇದಕ್ಕೂ ಮೊದಲು ಮಾತನಾಡಿದ್ದ ತೋಮರ್‌, ‘ಸರ್ಕಾರವು ರೈತ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಮುಂದಿನ ಮಾತುಕತೆಗೆ ದಿನಾಂಕ ನಿಗದಿಪಡಿಸಲಿದೆ. ರೈತ ನಾಯಕರೊಂದಿಗೆ ಯಾವುದೇ ಸಮಯದಲ್ಲಿ ಚರ್ಚಿಸಲು ಸರ್ಕಾರವು ಸಿದ್ಧವಿದೆ. ರೈತ ನಾಯಕರು ಸಿದ್ಧರಾಗಬೇಕು ಮತ್ತು ಸಿದ್ಧರಾದಾಗ ಅದನ್ನು ತಿಳಿಸಬೇಕು’ ಎಂದು ಹೇಳಿದ್ದರು.

ಉತ್ತರಾಖಂಡದ 100ಕ್ಕೂ ಹೆಚ್ಚು ರೈತರ ನಿಯೋಗವು ಭಾನುವಾರ ಹಾಗೂ ಹರಿಯಾಣದ 29 ರೈತರ ನಿಯೋಗ ಶನಿವಾರ ತೋಮರ್‌ ಅವರನ್ನು ಭೇಟಿ ಮಾಡಿ ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿತ್ತು. ಮಾತ್ರವಲ್ಲದೆ ಕಾಯ್ದೆಗಳನ್ನು ರದ್ದುಪಡಿಸಿದರೆ ಪ್ರತಿಭಟಿಸುವುದಾಗಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.