ADVERTISEMENT

ವಿಮಾನದಲ್ಲಿ ಪ್ರಯಾಣಿಕನ ನೆರವಿಗೆ ಬಂದ ಕೇಂದ್ರ ಸಚಿವ ಭಾಗವತ್: ಪ್ರಧಾನಿ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2021, 3:13 IST
Last Updated 17 ನವೆಂಬರ್ 2021, 3:13 IST
 ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕೃಷ್ಣರಾವ್‌ ಕರಾಡ್‌ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವುದು
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕೃಷ್ಣರಾವ್‌ ಕರಾಡ್‌ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವುದು   

ನವದೆಹಲಿ: ದೆಹಲಿ ಮತ್ತು ಮುಂಬೈ ನಡುವಿನ ಇಂಡಿಗೊ ವಿಮಾನದಲ್ಲಿ ದಿಢೀರ್‌ ಅಸ್ವಸ್ಥಗೊಂಡಿದ್ದ ಪ್ರಯಾಣಿಕರೊಬ್ಬರಿಗೆ ವೈದ್ಯರೂ ಆಗಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕೃಷ್ಣರಾವ್‌ ಕರಾಡ್‌ ನೆರವಾಗಿದ್ದಾರೆ. ಭಾಗವತ್ ಅವರ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ತದೊತ್ತಡದಲ್ಲಿನ ಏರುಪೇರಿನ ಕಾರಣಗಳಿಂದಾಗಿ ವಿಮಾನಯಾನದ ನಡುವೆ ಪ್ರಯಾಣಿಕರೊಬ್ಬರಿಗೆ ತಲೆಸುತ್ತು ಬಂದು ಬಿದ್ದಿದ್ದಾರೆ. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ.ಭಾಗವತ್‌ ಕರಾಡ್‌ ಅವರು ಪ್ರಥಮ ಚಿಕಿತ್ಸೆ ನೀಡುವ ಮೂಲಕ ನೆರವಾಗಿದ್ದಾರೆ. ಡಾ.ಭಾಗವತ್‌ ಕರಾಡ್‌ ಅವರು ಮಕ್ಕಳ ತಜ್ಞರು.

ತಲೆಸುತ್ತು ಬಂದಿರುವ ಪ್ರಯಾಣಿಕನನ್ನು ಸೀಟ್‌ನ ಮೇಲೆ ಮಲಗಿಸಿರುವ ಫೋಟೊ ಹಂಚಿಕೊಳ್ಳಲಾಗಿದೆ. 'ರಕ್ತದೊತ್ತಡ ಕುಸಿದ ಕಾರಣ ಅವರಿಗೆ ತಲೆಸುತ್ತು ಬಂದು ಬೆವರುತ್ತಿದ್ದರು. ಅವರು ಧರಿಸಿದ್ದ ಬಟ್ಟೆಯನ್ನು ಸಡಿಲಗೊಳಿಸಿ, ಎದೆಯ ಭಾಗವನ್ನು ಉಜ್ಜಿ ಹಾಗೂ ಅವರ ಕಾಲುಗಳನ್ನು ಮೇಲಕ್ಕೆ ಎತ್ತುವಂತೆ ಮಾಡಿದ ಬಳಿಕ ಗ್ಲೂಕೋಸ್‌ ನೀಡಲಾಯಿತು. 30 ನಿಮಿಷಗಳ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು' ಎಂದು ಸಚಿವ ಭಾಗವತ್‌ ತಿಳಿಸಿರುವುದಾಗಿ ವರದಿಯಾಗಿದೆ.

ADVERTISEMENT

ಭಾಗವತ್‌ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಹೃದಯಾಳದಿಂದ ಸದಾ ಒಬ್ಬ ವೈದ್ಯರೇ! ನನ್ನ ಸಹವರ್ತಿಯಿಂದ ಅತ್ಯುತ್ತಮ ನಡೆ' ಎಂದು ಹೊಗಳಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಸೇರಿದಂತೆ ಹಲವು ರಾಜಕಾರಣಗಳು ಭಾಗವತ್‌ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಟ್ವೀಟಿಸಿದ್ದಾರೆ. ಇಂಡಿಗೊ ವಿಮಾನಯಾನ ಸಂಸ್ಥೆ ಧನ್ಯವಾದ ತಿಳಿಸುವ ಜೊತೆಗೆ ಶ್ಲಾಘಿಸಿ ಪೋಸ್ಟ್‌ ಮಾಡಿದೆ. 'ಸ್ವಯಂ ಪ್ರೇರಿತರಾಗಿ ಸಹ ಪ್ರಯಾಣಿಕರ ಸಹಾಯಕ್ಕೆ ಬಂದಿದ್ದು ಸ್ಫೂರ್ತಿದಾಯಕವಾದುದು...' ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.