ADVERTISEMENT

ಸಾಮಾಜಿಕ ಮಾಧ್ಯಮಗಳ ಇಬ್ಬಗೆಯ ನೀತಿಗೆ ಅನುಮತಿ ಇಲ್ಲ: ರವಿಶಂಕರ್‌ ಪ್ರಸಾದ್‌

ಏಜೆನ್ಸೀಸ್
Published 11 ಫೆಬ್ರುವರಿ 2021, 6:05 IST
Last Updated 11 ಫೆಬ್ರುವರಿ 2021, 6:05 IST
ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌
ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌   

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಇಬ್ಬಗೆಯ ನೀತಿಗೆ ಭಾರತದಲ್ಲಿ ಅನುಮತಿ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಟ್ವಿಟರ್‌ ಜೊತೆಗಿನ ಕೇಂದ್ರ ಸರ್ಕಾರದ ಜಟಾಪಟಿಯ ನಡುವೆಯೇ ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿರುವ ಅವರು, 'ಸಾಮಾಜಿಕ ಮಾಧ್ಯಮ ವೇದಿಕೆಗಳ ಇಬ್ಬಗೆಯ ನೀತಿಯನ್ನು ಭಾರತದಲ್ಲಿ ಅನುಮತಿಸಲಾಗದು. ಟ್ವಿಟರ್, ಫೇಸ್‌ಬುಕ್, ಲಿಂಕ್ಡ್‌ಇನ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳು ತಪ್ಪು ಮಾಡಿದ್ದಲ್ಲಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.

'ನಾವು ಸಾಮಾಜಿಕ ಮಾಧ್ಯಮಗಳನ್ನು ತುಂಬಾ ಗೌರವಿಸುತ್ತೇವೆ. ಅವುಗಳಿಂದ ಸಾಮಾನ್ಯ ಜನರಿಗೆ ಸಹಾಯವಾಗುತ್ತಿದೆ. ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಸಾಮಾಜಿಕ ಮಾಧ್ಯಮಗಳು ದೊಡ್ಡ ಪಾತ್ರ ವಹಿಸಿವೆ. ಆದರೆ, ನಕಲಿ ಸುದ್ದಿಗಳನ್ನು ಹರಡಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು' ಎಂದು ಪ್ರಸಾದ್‌ ಹೇಳಿದ್ದಾರೆ.

ADVERTISEMENT

'ನೀವು ಇಲ್ಲಿ ಕೋಟ್ಯಾಂತರ ಫಾಲೋವರ್‌ಗಳನ್ನು ಹೊಂದಿದ್ದೀರಿ. ಭಾರತದಲ್ಲಿ ಕಾರ್ಯನಿರ್ವಹಿಸಿ. ಅದರಿಂದ ಹಣ ಸಂಪಾದಿಸಿ. ಆದರೆ, ನೀವು ಭಾರತೀಯ ಕಾನೂನು ಮತ್ತು ಸಂವಿಧಾನವನ್ನು ಪಾಲಿಸಬೇಕಾಗುತ್ತದೆ' ಎಂದು ಸಾಮಾಜಿಕ ಮಾಧ್ಯಮಗಳಿಗೆ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 'ಸುಳ್ಳು ಮತ್ತು ಪ್ರಚೋದನಕಾರಿ ವಿಚಾರವನ್ನು' ಹಂಚಿಕೊಂಡಿದ್ದ ಆರೋಪದ ಮೇಲೆ ಬ್ಲಾಕ್ ಮಾಡಲಾಗಿದ್ದ ಟ್ವಿಟರ್ ಖಾತೆಗಳನ್ನು ಮರುಸ್ಥಾಪಿಸಿರುವ ಬಗ್ಗೆ ಸರ್ಕಾರವು ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಸರ್ಕಾರದ ಆದೇಶದ ಹೊರತಾಗಿಯೂ ಟ್ವಿಟರ್ ಏಕಪಕ್ಷೀಯವಾಗಿ ಖಾತೆಗಳನ್ನು ಮರುಸ್ಥಾಪಿಸಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

‘ಸರ್ಕಾರದ ನಿರ್ದೇಶನವನ್ನು ಟ್ವಿಟರ್ ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.

ಕೆಲವು ಖಾತೆಗಳನ್ನು ಬ್ಲಾಕ್ ಮಾಡುವ ಭಾರತ ಸರ್ಕಾರದ ಆದೇಶ ಸ್ಥಳೀಯ ಕಾನೂನಿಗೆ ವ್ಯತಿರಿಕ್ತವಾಗಿದೆ. ಖಾತೆಗಳ ಸಂಪೂರ್ಣ ನಿಷೇಧ ಒಪ್ಪಲಾಗದು ಎಂದಿರುವ ಟ್ವಿಟರ್ ಅವುಗಳನ್ನು ಭಾರತದೊಳಗೆ ಮಾತ್ರ ನಿರ್ಬಂಧಿಸಬಹುದು ಎಂದು ಬುಧವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.