ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್, ಜನತೆಯ ರಾಷ್ಟ್ರಪತಿ ಎಂದೇ ಖ್ಯಾತರಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯ ದಿನವಾದ ಇಂದು (ಜು.27)ದೇಶದ ಹಲವು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ದೇಶ ಕಂಡ ಶ್ರೇಷ್ಠ ವಿಜ್ಞಾನಿಯಾಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಯುವಜನರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಪುಣ್ಯತಿಥಿಯ ಈ ದಿನದಂದು ಅವರಿಗೆ ನನ್ನ ನಮನಗಳು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
ಅಬ್ದುಲ್ ಕಲಾಂ ಅವರಿಗೆ ನನ್ನ ನಮನಗಳು, ಜ್ಞಾನ, ವಿವೇಕ ಹಾಗೂ ಸರಳತೆಯ ಭಾಗವಾಗಿದ್ದ ಅವರು ವಿಜ್ಞಾನ ಕ್ಷೇತ್ರದಿಂದ ಹಿಡಿದು ರಾಜಕೀಯ ಕ್ಷೇತ್ರದಲ್ಲೂ ಪಾಂಡಿತ್ಯ ಸಾಧಿಸಿದ್ದರು. ಭಾರತದ ಸ್ವಾವಲಂಭಿ ಜ್ಞಾನದ ಪರಿಕಲ್ಪನೆಗೆ ಅಬ್ದುಲ್ ಕಲಾಂ ಅವರು ಪ್ರೇರಣೆಯಾಗಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ದೇಶ ಕಂಡ ಬುದ್ದಿವಂತ ರಾಷ್ಟ್ರಪತಿ ಕಲಾಂಜೀ ಅವರಿಗೆ ನನ್ನ ನಮನಗಳು, ಅವರು ವಿಜ್ಞಾನ ಸಲಹೆಗಾರರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದೇನೆ. ಆ ದಿನಗಳನ್ನು ಮರೆಯುವಂತಿಲ್ಲ ಎಂದು ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಭಾರತದ ‘ಮಿಸೈಲ್ ಮ್ಯಾನ್’ದೇಶದ 11ನೇ ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ. ಅವರ ಬದುಕು, ಸಾಧನೆ, ವ್ಯಕ್ತಿತ್ವಗಳು ಆದರ್ಶಪ್ರಾಯವಾಗಿದ್ದು, ಕೋಟ್ಯಂತರ ಜನರಿಗೆ ನಿರಂತರ ಸ್ಫೂರ್ತಿ ನೀಡುತ್ತಿವೆ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಮೂಲಕ ಗೌರಮ ನಮನ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.