ನವದೆಹಲಿ: ಕಳೆದ ವರ್ಷ ನವೆಂಬರ್ನಲ್ಲಿ ಕೇಂದ್ರ ಸರ್ಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಹೊರತಾಗಿಯೂ, ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್ಎಲ್ಎಫ್) ಮಣಿಪುರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಬಗ್ಗೆ ಭದ್ರತಾ ಏಜೆನ್ಸಿಗಳು ಕಳವಳ ವ್ಯಕ್ತಪಡಿಸಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕೆಎಚ್. ಪಾಂಬಿ ನೇತೃತ್ವದ ಯುಎನ್ಎಲ್ಎಫ್ (ಪಿ) ಸಂಘಟನೆಯು 2023ರ ನವೆಂಬರ್ 23ರಂದು ಕೇಂದ್ರ ಸರ್ಕಾರದ ಜೊತೆ ಕದನ ವಿರಾಮದ ಒಪ್ಪಂದಕ್ಕೆ ಸಹಿ ಹಾಕಿ, ಹಿಂಸಾಚಾರದಲ್ಲಿ ತೊಡಗುವುದಿಲ್ಲ ಎಂದು ಹೇಳಿತ್ತು. ಈ ಮೂಲಕ ಸರ್ಕಾರದ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಇಂಫಾಲ್ ಕಣಿವೆಯ ಮೊದಲ ಮೈತೇಯಿ ಸಂಘಟನೆ ಎನಿಸಿಕೊಂಡಿತ್ತು. ಆದರೆ, ಈ ಸಂಘಟನೆಯು ತನ್ನ ಕೇಡರ್ಗಳು ಯಾವೆಲ್ಲಾ ಪ್ರದೇಶಗಳಲ್ಲಿದ್ದಾರೆ ಎಂಬ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಜೊತೆಗೆ ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಗುಂಪಿನ ಸದಸ್ಯರು ಕುಕಿ ಬುಡಕಟ್ಟು ಸಮುದಾಯದ ಬಾಹುಳ್ಯವಿರುವ ಹೊರವಲಯದ ಪ್ರದೇಶಗಳಲ್ಲಿ ತಮ್ಮ ಶಿಬಿರಗಳನ್ನು ತೆರೆಯುತ್ತಿದ್ದಾರೆ. ಈ ಮೂಲಕ ಬುಡಕಟ್ಟು ಸಮುದಾಯವನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಭದ್ರತಾ ಪಡೆಗಳು ಮತ್ತು ಸಾರ್ವಜನಿಕರ ವಿರುದ್ಧ ಯುಎನ್ಎಲ್ಎಫ್ (ಪಿ) ಕೇಡರ್ಗಳು ಹಿಂಸಾಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಭದ್ರತಾ ಏಜೆನ್ಸಿಗಳು ಹೇಳಿವೆ.
ಮಣಿಪುರದ ಪೂರ್ವ ಭಾಗದ ಚಿಂಗರೆಲ್ನಲ್ಲಿ ಫೆ.13ರಂದು 5ನೇ ಇಂಡಿಯಾ ರಿಸರ್ವ್ ಬೆಟಾಲಿಯನ್ನಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಕದ್ದೊಯ್ದಿದ್ದರು. ಈ ಘಟನೆಯ ಬಳಿಕ ಯುಎನ್ಎಲ್ಎಫ್ ಸಂಘಟನೆಯ ಇಬ್ಬರು ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣವನ್ನು ಇದೀಗ ಸಿಬಿಐಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.