ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣ ಸಂತ್ರಸ್ತೆಯ ಕಾರು ಜುಲೈ 28ರಂದು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಆಕೆಯ ಸಂಬಂಧಿಕರಿಬ್ಬರುಸ್ಥಳದಲ್ಲೇ ಮೃತಪಟ್ಟಿದ್ದರು.
ರಾಯ್ಬರೇಲಿಯಲ್ಲಿ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಸಂತ್ರಸ್ತೆಯ ಪರಿಸ್ಥಿತಿ ಗಂಭೀರವಾಗಿದೆ.ಈ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸೆಂಗರ್ ವಿರುದ್ಧಹತ್ಯೆಗೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ತನ್ನ ಮಗಳನ್ನು ಹತ್ಯೆ ಮಾಡುವುದಕ್ಕಾಗಿ ಕುಲ್ದೀಪ್ ಸೆಂಗರ್ ಜೈಲಿನಲ್ಲಿದ್ದುಕೊಂಡೇ ಸಂಚು ನಡೆಸಿದ್ದಾರೆ ಎಂದು ಸಂತ್ರಸ್ತೆಯ ಅಮ್ಮ ಆರೋಪಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟಸಂಬಂಧಿಕರಲ್ಲಿಒಬ್ಬರು ಅತ್ಯಾಚಾರ ಪ್ರಕರಣದ ಸಾಕ್ಷಿಯಾಗಿದ್ದಾರೆ.
ಇದೊಂದು ಅಪಘಾತ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಸಂತ್ರಸ್ತೆಯನ್ನು ಲಖನೌದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ವೈದ್ಯರ ಪ್ರಕಾರ ಆಕೆಯ ಎದೆ, ಕುತ್ತಿಗೆ, ತೋಳು ಮತ್ತು ಕಾಲಿಗೆ ತೀವ್ರಗಾಯಗಳಾಗಿವೆ. ಗಂಭೀರ ಪರಿಸ್ಥಿತಿಯಲ್ಲಿರುವ ಆಕೆಯನ್ನು ವೆಂಟಿಲೇಟರ್ನಲ್ಲಿರಿಸಲಾಗಿದೆ.
ಕಾರು ಅಪಘಾತ ಪ್ರಕರಣದ ಬಗ್ಗೆ ಪೊಲೀಸರು ಸೋಮವಾರ ಸುದ್ದಿಗೋಷ್ಠಿ ನಡಸಿದ್ದು, ಟ್ರಕ್ ಚಾಲಕ ಮತ್ತು ಮಾಲೀಕರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.ಅಪಘಾತದ ವೇಳೆ ಟ್ರಕ್ನ ನಂಬರ್ ಪ್ಲೇಟ್ನ್ನು ಮರೆ ಮಾಡಲಾಗಿತ್ತು. ಈ ಬಗ್ಗೆ ಕೇಳಿದಾಗ ವಾಹನದ ಸಾಲ ಪಾವತಿ ಮಾಡಲು ಬಾಕಿ ಇರುವುದರಿಂದ ನಂಬರ್ ಪ್ಲೇಟ್ ಮರೆ ಮಾಡಲಾಗಿತ್ತು ಎಂದು ಮಾಲೀಕರು ಹೇಳಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿಎನ್ಡಿಟಿವಿ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.