ನವದೆಹಲಿ: ಅಹಂಕಾರಿ ಮನುಷ್ಯನು ‘ಯೋಜಿತವಲ್ಲದ ಲಾಕ್ಡೌನ್’ ಅನುಷ್ಠಾನಗೊಳಿಸಿದ್ದರ ಪರಿಣಾಮವಾಗಿ ಕೋವಿಡ್–19 ಸೋಂಕು ದೇಶದಾದ್ಯಂತ ಹರಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ದೇಶದಾದ್ಯಂತ ಕೊರೊನಾವೈರಸ್ ಪ್ರಕರಣಗಳು ಈ ವಾರದಲ್ಲಿ 50 ಲಕ್ಷದ ಗಡಿ ದಾಟಲಿದೆ. 10 ಲಕ್ಷ ಸಕ್ರಿಯ ಪ್ರಕರಣಗಳು ಕಂಡುಬರಲಿವೆ. ಯಾವುದೇ ಯೋಜನೆಯಿಲ್ಲದೆ ಲಾಕ್ಡೌನ್ ಜಾರಿಗೊಳಿಸಿದ್ದು ಅಹಂ ತುಂಬಿದ ವ್ಯಕ್ತಿಯ ಕೊಡುಗೆಯಾಗಿದ್ದು, ದೇಶದಾದ್ಯಂತ ಕೊರೊನಾವೈರಸ್ ಹರಡಲು ಕಾರಣವಾಯಿತು’ ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರಿದು ‘ಆತ್ಮನಿರ್ಭರ’ ಯೋಜನೆಗೆ ಸಂಬಂಧಿಸಿದಂತೆಯೂ ಪ್ರಧಾನಿ ವಿರುದ್ಧ ಕಿಡಿಕಾರಿರುವ ರಾಹುಲ್, ‘ಮೋದಿ ಸರ್ಕಾರವು ಜನರಿಗೆ ‘ಆತ್ಮನಿರ್ಭರ ಭಾರತ’ಕ್ಕೆ ಕರೆ ನೀಡಿದೆ. ನೀವು ನಿಮ್ಮನ್ನು ಮತ್ತು ನಿಮ್ಮ ಜೀವನವನ್ನು ಕಾಪಾಡಿಕೊಳ್ಳಿ. ಏಕೆಂದರೆ ಪ್ರಧಾನಿ ನವಿಲುಗಳೊಂದಿಗೆ ಬ್ಯುಸಿಯಾಗಿದ್ದಾರೆ’ ಎಂದೂ ಟೀಕಿಸಿದ್ದಾರೆ.
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 24 ಸಾವಿರ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಕೋವಿಡ್–19 ಸೋಂಕು ಪ್ರಕರಣಗಳ ಸಂಖ್ಯೆ 48 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.